ಮಡಿಕೇರಿ: ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಡಿಕೇರಿ ಜನೋತ್ಸವಕ್ಕೆ ಈ ಬಾರಿ ಕೊರೊನಾ ಸೂತಕದ ಛಾಯೆ ಆವರಿಸಿದೆ. ಹೌದು ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ರಾಜರ ಕಾಲದಿಂದಲೂ ಕರಗ ಮಹೋತ್ಸವ ನಡೆದು ಬಂದಿದೆ. ದಸರಾ ಆರಂಭದಿಂದ ಕೊನೆಯ ದಿನದವರೆಗೆ ಅಂದರೆ ಒಂಭತ್ತು ದಿನಗಳ ಕಾಲ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರದ ಪ್ರತೀ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಈ ಬಾರಿ ಕೊರೊನಾದಿಂದಾಗಿ ಅದಕ್ಕೆ ಬ್ರೇಕ್ ಬಿದ್ದಿದೆ.
ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದ ಕರಗ ಉತ್ಸವವನ್ನು ನಿಲ್ಲಿಸಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂಗಳ ಹೆಸರೇಳಿಕೊಂಡು ಶಾಸಕರಾಗಿರುವ ಮತ್ತು ಅಧಿಕಾರಕ್ಕೆ ಬಂದಿರುವ ಸರ್ಕಾರ ಈಗ ಅವರ ಧಾರ್ಮಿಕ ಆಚರಣೆಗಳನ್ನು ಮಾಡಲು ಬಿಡದೆ, ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ ಎನ್ನುತ್ತಿದ್ದಾರೆ.
ಕರಗ ಉತ್ಸವ ನಡೆಸಿ, ಬನ್ನಿ ಕಡಿಯೋದು ನಮ್ಮ ಸಂಪ್ರದಾಯ. ಅದನ್ನು ಕ್ರಮಬದ್ಧವಾಗಿ ಮಾಡಲು ಬಿಡುವುದಿಲ್ಲವೆಂದರೆ ಹೇಗೆ? ಕೊರೊನಾ ನಿಯಂತ್ರಿಸುವ ಹೆಸರಿನಲ್ಲಿ ಎಲ್ಲವನ್ನೂ ನಿಷೇಧಿಸುವುದು ಎಷ್ಟು ಸರಿ ಎನ್ನೋದು ಸಾರ್ವಜನಿಕರ ಪ್ರಶ್ನೆ. ಅಷ್ಟಕ್ಕೂ ಕರಗ ಆರಂಭವಾಗಿದ್ದೇ ಸಾಂಕ್ರಾಮಿಕ ರೋಗಗಳು ಉಲ್ಭಣಗೊಂಡಾಗ ಅವುಗಳನ್ನು ನಿಯಂತ್ರಿಸುವುದಕ್ಕಾಗಿ. ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳು ನಗರದ ಎಲ್ಲೆಡೆ ಸುತ್ತಾಡುವುದರಿಂದ ಈಗ ಬಂದಿರುವ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಇದ್ಯಾವುದನ್ನೂ ಗಮನಿಸದ ಜಿಲ್ಲಾಡಳಿತ ಕೊರೊನಾ ವೈರಸ್ ನೆಪವೊಡ್ಡಿ ಕರಗ ಉತ್ಸವವನ್ನೇ ನಿಷೇಧಿಸಿರುವುದು ಸರಿಯಲ್ಲ ಅನ್ನೋದು ಕೋಟೆ ಮಾರಿಯಮ್ಮ ದೇವಾಲಯದ ಅರ್ಚಕರ ಅಸಮಾಧಾನ.
ಒಟ್ಟಿನಲ್ಲಿ ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಕರಗ ಉತ್ಸವ ಮತ್ತು ಅದ್ಧೂರಿ ದಸರಾ ನಿಷೇಧಿಸಿರುವುದು ದಸರಾ ಜನೋತ್ಸವಕ್ಕೆ ಮತ್ತು ಇಡೀ ಜಿಲ್ಲೆಗೆ ಸೂತಕದ ಛಾಯೆ ಆವರಿಸಿದೆ ಅನ್ನೋದು ಸಾರ್ವಜನಿಕರ ಆಕ್ರೋಶವಾಗಿದೆ.