– ಪ್ರತಿ ತಿಂಗಳು 1,000 ರೂಪಾಯಿನಂತೆ 3 ವರ್ಷ ಧನ ಸಹಾಯ
ಗದಗ: ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಮಾಂಗಲ್ಯ ಅಡವಿಟ್ಟು ಟಿವಿ ಕೊಡಿಸಿದ ಮಹಾ ತಾಯಿ ಕುರಿತು ಪಬ್ಲಿಕ್ ಟಿವಿನಲ್ಲಿ ವರದಿ ಪ್ರಸಾರ ಮಾಡಿತ್ತು. ಇದೀಗ ತಾಯಿಗೆ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ತ್ಯಾಗಮಯಿ ತಾಯಿಯ ಮಾಂಗಲ್ಯ ಹಿಂದಿರುಗಿಸಿದ ಅಂಗಡಿ ಮಾಲೀಕ
ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮ ನಿವಾಸಿ ಕಸ್ತೂರಿ ಅವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು ಟಿವಿಯನ್ನು ಕೊಡಿಸಿದ್ದರು. ಇದೀಗ ತಾಯಿಗೆ ಸಹಾಯ ಮಾಡಲು ಅನೇಕ ದಾನಿಗಳು ಮುಂದಾಗುತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ ಸಹ 50 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟಿರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ- ಗದಗ ಜಿಲ್ಲೆಯಲ್ಲಿ ಮನಕಲಕುವ ಘಟನೆ
ಹುಬ್ಬಳ್ಳಿಯಿಂದ ಆಪ್ತ ಸಹಾಯಕನನ್ನು ರಡ್ಡೆರ ನಾಗನೂರ ಗ್ರಾಮಕ್ಕೆ ಕಳುಹಿಸಿ 50 ಸಾವಿರ ರೂಪಾಯಿ ಹಣ ಕೊಡಿಸಿದ್ದಾರೆ. ಅದರಲ್ಲಿ ಮಾಂಗಲ್ಯ ಬಿಡಿಸಲು 15 ಸಾವಿರ, ಮಕ್ಕಳ ಶಿಕ್ಷಣಕ್ಕೆ 35 ಸಾವಿರ ರೂಪಾಯಿ ನೀಡಿ ಮುಂದೆ ಸಹಾಯ ಬೇಕಾದರೆ ಸಂಪರ್ಕಿಸುವಂತೆ ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಸಹ 20 ಸಾವಿರ ಚೆಕ್ ನೀಡಿದ್ದಾರೆ. ತಮ್ಮ ಬೆಂಬಲಿಗರನ್ನು ಗ್ರಾಮಕ್ಕೆ ಕಳುಹಿಸಿ ಅವರ ಮೂಲಕ 20 ಸಾವಿರ ರೂ. ಚೆಕ್ ಕೊಡಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವದಡಿ ಮಕ್ಕಳಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿನಂತೆ 3 ವರ್ಷ ಧನ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಹೀಗೆ ಅನೇಕ ಸಂಘ ಸಂಸ್ಥೆಗಳು ಮಹಾ ತಾಯಿಗೆ ಧನ ಸಹಾಯದ ಮೂಲಕ ನೆರವಾಗುತ್ತಿದ್ದಾರೆ.