ನವದೆಹಲಿ: ಸಚಿವ ಸ್ಥಾನ ನೀಡದಿದ್ದಲ್ಲಿ ಕೆಲವು ಶಾಸಕರೊಂದಿಗೆ ಬಿಜೆಪಿ ತೊರೆಯುವುದಾಗಿ ಎಂಟಿಬಿ ನಾಗರಾಜ್ ಹೈಕಮಾಂಡ್ ನಾಯಕರಿಗೆ ಎಚ್ಚರಿಕೆ ನೀಡಿದ್ದರಂತೆ. ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿದ್ದ ಅವರು ಮಂತ್ರಿಗಿರಿ ಕೈ ತಪ್ಪಿದ್ರೆ ಮತ್ತೊಂದು ಆಪರೇಷನ್ ನಡೆಸುವ ವಾರ್ನಿಂಗ್ ನೀಡಿದ್ದರು ಎಂದು ಹೇಳಲಾಗ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಚನೆಯಾಗುತ್ತಿರುವ ಸಚಿವ ಸಂಪುಟದಲ್ಲಿ ತಮ್ಮನ್ನು ಕೈ ಬಿಡಲಾಗುತ್ತೆ ಎಂದು ಸುದ್ದಿಯಾಗುತ್ತಿದ್ದಂತೆ ಅಖಾಡಕ್ಕೆ ಇಳಿದಿದ್ದ ಅವರು, ಉಸ್ತುವಾರಿ ಅರುಣ್ ಸಿಂಗ್ ಮೂಲಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದರು ಎಂಬ ಸುದ್ದಿ ಕಮಲ ಅಂಗಳದಲ್ಲಿ ಹರಿದಾಡುತ್ತಿದೆ.
ಜೆ.ಪಿ.ನಡ್ಡಾಗೆ ಬರೆದ ನಾಲ್ಕು ಪುಟಗಳ ಸುಧೀರ್ಘ ಪತ್ರದಲ್ಲಿ 2019 ಜುಲೈ ತಿಂಗಳಲ್ಲಿ ನಡೆದ ಘಟನೆಗಳನ್ನು ಅವರು ನೆನಪಿಸಿದ್ದಾರೆ. ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಮಂತ್ರಿಯಾಗಿದ್ದೆ, ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎನ್ನುವ ಕಾರಣಕ್ಕೆ ಪಕ್ಷ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲಾಗಿತ್ತು. ಬಿಜೆಪಿ ಸೇರುವ ಪ್ರಕ್ರಿಯೆ ಸುಲಭದಾಗಿರಲಿಲ್ಲ. ಈ ವೇಳೆ ಸಾಕಷ್ಟು ಏಳು ಬೀಳುಗಳನ್ನು ಎದುರಿಸುತ್ತಿದ್ದೇವೆ. ಬಿಎಸ್ ಯಡಿಯೂರಪ್ಪ ಅವರು ಸರ್ಕಾರದ ಪೂರ್ಣ ಅವಧಿಗೆ ಮಂತ್ರಿ ಮಾಡುವ ಭರವಸೆ ನೀಡಿದ್ದರು. ಆದರೆ ಬಿಎಸ್ವೈ ಬದಲಾಗುತ್ತಿದ್ದಂತೆ ಹೈಕಮಾಂಡ್ ನಮ್ಮನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಸರ್ಕಾರ ರಚನೆಯಲ್ಲಿ ನಮ್ಮ ಪಾತ್ರ ಮುಖ್ಯವಾಗಿದ್ದು, ಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಾರ್ಟಿಯಿಂದ ಉಚ್ಛಾಟನೆ ಮಾಡಿದ್ರೂ ಬಿಜೆಪಿಗೇ ವೋಟ್ ಹಾಕೋದು: ಸಿದ್ದು ಸವದಿ
ಒಂದು ವೇಳೆ ಮಂತ್ರಿ ಮಂಡಲಕ್ಕೆ ತಮ್ಮನ್ನು ಸೇರ್ಪಡೆ ಮಾಡಿಕೊಳ್ಳದಿದ್ದಲ್ಲಿ ಕೆಲವು ಶಾಸಕರೊಂದಿಗೆ ಪಕ್ಷ ತೊರೆಯುವುದಾಗಿ ಅವರು ಜೆ.ಪಿ ನಡ್ಡಾಗೆ ತಿಳಿಸಿದರಂತೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ ಜೆ.ಪಿ ನಡ್ಡಾ ಎಂಟಿಬಿ ನಾಗರಾಜ್ ಅವರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲು ಸೂಚಿಸಿದ್ದರು. ಈ ಕಾರಣದಿಂದಲೇ ಕಡೆ ಕ್ಷಣದವರೆಗೂ ಡೊಲಾಯಮಾನ ಪರಿಸ್ಥಿತಿಯಲ್ಲಿದ್ದ ಎಂಟಿಬಿ ನಾಗರಾಜ್ ಹೆಸರು ಕಡೆದ ಕ್ಷಣದಲ್ಲಿ ಅಚ್ಚರಿ ರೂಪದಲ್ಲಿ ಮಿನಿಸ್ಟರ್ಸ್ ಲಿಸ್ಟ್ ಸೇರಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಕ್ಷ ತಾಯಿ ಇದ್ದಂತೆ, ತುತ್ತು ತಡವಾಗಿ ಕೊಟ್ಟಿರಬಹುದು, ಯಾರೂ ಪ್ರತಿಭಟಿಸಬೇಡಿ: ರಾಜೂಗೌಡ