– ನಾಮಕರಣಕ್ಕೆ ಮನವಿ ಮಾಡಿದ ಕರಾವಳಿ ಶಾಸಕರ ನಿಯೋಗ
ಮಂಗಳೂರು: ತುಳುನಾಡಿನ ವೀರಪುರುಷರಾದ ಅವಳಿ ಸಹೋದರರಾದ ಕೋಟಿ-ಚೆನ್ನಯ್ಯರ ಹೆಸರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಕರಾವಳಿಯ ಶಾಸಕರು ಒತ್ತಾಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಿಭಜಿತ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಶಾಸಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.
ತುಳುನಾಡಿನಲ್ಲಿ ಇತಿಹಾಸ ಸೃಷ್ಟಿಸಿ ಬಾಳಿ ಬದುಕಿದ ವೀರಪುರುಷರಾದ ಕೋಟಿ-ಚೆನ್ನಯ್ಯನವರು ಇಂದಿಗೂ ಸಾವಿರಾರು ಕಡೆಗಳಲ್ಲಿ ಆರಾಧನೆಗೊಳ್ಳುತ್ತಿದ್ದಾರೆ. ಇವರ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡೋದ್ರಿಂದ ದೇಶ ವಿದೇಶಗಳಲ್ಲಿ ಈ ಅವಳಿ ವೀರ ಪುರುಷರ ಹೆಸರು ಅಜರಾಮರವಾಗಿ ಉಳಿಯುವಂತಾಗುತ್ತದೆ. ವಿಶ್ವದೆಲ್ಲೆಡೆ ಇರುವ ತುಳುವರಿಗೂ ಇವರ ಹೆಸರಿಡೋದ್ರಿಂದ ಭಾವನಾತ್ಮಕ ಸಂಬಂಧ ಇರುತ್ತದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಮನವಿ ಸಲ್ಲಿಸಬೇಕೆಂದು ನಿಯೋಗದ ಸದಸ್ಯರು ಒತ್ತಾಯಿಸಿದರು.
ನಿಯೋಗದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಸಭೆಯ ಮುಖ್ಯ ಸಚೇತಕರಾದ ಸುನೀಲ್ ಕುಮಾರ್ ಕಾರ್ಕಳ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಉಡುಪಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.