-ಬಿಎಸ್ವೈ ಸರ್ಕಾರಕ್ಕೆ ಆಯಸ್ಸು ಕಡಿಮೆ
ಹಾಸನ: ಕೊರೊನಾ ಹೆಸರಿನಲ್ಲಿ ಬಿಜೆಪಿಯಿಂದ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸುವ ಅಗತ್ಯತೆ ಇದೆ. ಸರ್ಕಾರಕ್ಕೆ ಆಯಸ್ಸು ಕಡಿಮೆ ಇದೆ. ಈ ಭ್ರಷ್ಟಾಚಾರದಲ್ಲಿ ಆರ್ಎಸ್ಎಸ್ ನವರು ಪಾಲುದಾರರು ಇರಬಹುದು ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 130 ದಿನಗಳಿಂದ ರಾಷ್ಟ್ರದಲ್ಲಿ ಸಂಭವಿಸಿರುವ ಕೊರೊನಾ ವೈರಸ್ ವಿಚಾರವಾಗಿ ಅನಾಹುತಗಳು ಸಂಭವಿಸಿದೆ. ದೇಶದ ಮತ್ತು ರಾಜ್ಯದ ಆರೋಗ್ಯದ ದೃಷ್ಠಿಯಲ್ಲಿ ಎಲ್ಲಾ ರೀತಿಯ ಸಹಕಾರವನ್ನು ಕಾಂಗ್ರೆಸ್, ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸಹಕಾರ ನೀಡಿದ್ದು, ದೇಶ ಒಂದು ಎಂದು ಸಾಬೀತುಪಡಿಸಿದೆ ಎಂದರು.
18 ಲಕ್ಷ ಕೊರೊನಾ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ. 1,500 ಜನರು ಮೃತಪಟ್ಟಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳು ಮಾಡಿರುವ ನಾಲ್ಕು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಮಂತ್ರಿಗಳು ಮತ್ತು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ ಎಂದು ದೂರಿದರು. ಲಾಕ್ ಡೌನ್ ಘೋಷಣೆ ಮಾಡಿದ 120 ದಿನಗಳ ನಂತರ ಬೆಂಗಳೂರಿನಲ್ಲಿ ವಸ್ತು ಪ್ರದರ್ಶನದ ಮೈದಾನದಲ್ಲಿ ಕೊರೊನಾ ಸೆಂಟರ್ ಮಾಡಲು ಹೊರಟಿದ್ದಾರೆ. ಕೊರೊನಾ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೊರೊನಾ ವೇಳೆ ಯಾವ ಸಿದ್ಧತೆಮಾಡಿಕೊಳ್ಳದೇ 90 ದಿನಗಳ ನಂತರ ಸಿದ್ಧತೆಗೆ ಮುಂದಾಗಿದ್ದಾರೆ. ಇಲ್ಲಿವರೆಗೂ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಈ ಸಂಕಷ್ಟದಲ್ಲಿ ಜನರು ಬದುಕುವುದೇ ಕಷ್ಟವಾಗಿದೆ. ಕೋವಿಡ್ ಹೆಸರಿನಲ್ಲಿ ಸತ್ತವರ ಮೇಲೆ ಭ್ರಷ್ಟಚಾರಗಳು ನಡೆದಿದೆ. ಹೆಣದ ಮೇಲೆ ಹಣ ಮಾಡಲು ಹೊರಟಿರುವುದಾಗಿ ಕಿಡಿಕಾರಿದರು.
ಬಿಜೆಪಿ ಸರ್ಕಾರದ ಆಡಳಿತ ಯಂತ್ರ ಕುಸಿದಿದ್ದು, ಇವರಲ್ಲೆ ಯಾವ ಹೊಂದಾಣಿಕೆ ಇರುವುದಿಲ್ಲ. ಹಸಿರು ಟವಲ್ ಹಾಕಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರವು ರೈತರ ಸಮಸ್ಯೆ ಬಗ್ಗೆ ಒಂದು ಮಾತನಾಡದೇ ಕೊರೊನಾ ಹೆಸರನ್ನು ಹೇಳುವ ಮೂಲಕ ಜಾರಿಕೊಳ್ಳುವ ಕೆಲಸ ಮಾಡುತ್ತಿದೆ. ಕೊರೊನಾದಿಂದ ಜನರು ಸಾಯುತ್ತಿದ್ದರೇ ರಾಜ್ಯ ಸರ್ಕಾರವು ಬೋರ್ಡ್ ಛೇರ್ಮನ್ ಇತರೆ ಸ್ಥಾನಗಳಿಗೆ ಅಧಿಕಾರ ನೀಡಲು ಹೊರಟಿರುವುದಾಗಿ ವ್ಯಂಗ್ಯವಾಡಿದರು. ಎಲ್ಲಾ ಆರೋಪಗಳನ್ನು ಮತ್ತು ಮಂತ್ರಿಗಳು ನೀಡಿರುವ ಸತ್ಯಾಸತ್ಯತೆಗಳನ್ನು ಪರಾಮರ್ಶಿಸಲು ರಾಜ್ಯ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ಆಯೋಗ ರಚಿಸಬೇಕೆಂದು ಇದೆ ವೇಳೆ ಒತ್ತಾಯಿಸಿದರು. ಹಣ ಲೂಟಿ ಮಾಡುತ್ತಿರುವ ಬಗ್ಗೆ ಇದನ್ನು ಪ್ರತಿ ಹಳ್ಳಿಗಳಿಗೆ ಕೊಂಡೂಯ್ಯಲಾಗುವುದು.
ನಮಗೆ ರಾಜ್ಯದ ಜನತೆಯ ಹಿತ ಪ್ರಮುಖವಾಗಿದ್ದು, ನಿಮ್ಮ ಗೊಡ್ಡು ನೋಟಿಸ್ ಗೆ ಯಾರು ಹೆದರುವುದಿಲ್ಲ. ಈ ಬಿಜೆಪಿ ಸರ್ಕಾರಕ್ಕೆ ಆಯಸ್ಸು ಕಡಿಮೆ ಇದ್ದು, ನ್ಯಾಯಾಂಗ ತನಿಖೆ ಮಾಡಿ ಶುದ್ಧ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಆರ್ಎಸ್ಎಸ್ ಶಿಸ್ತುಬದ್ಧ ಸಂಘಟನೆ ಎಂದು ಹೇಳುತ್ತಾರೆ. ಆದರೆ ಅವರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡದಿರುವುದನ್ನು ನೋಡಿದರೆ, ಭ್ರಷ್ಟಾಚಾರದಲ್ಲಿ ಆರ್ಎಸ್ಎಸ್ನವರೂ ಪಾಲುದಾರರು ಎನಿಸುತ್ತಿದೆ ಎಂದರು.