ಬೆಂಗಳೂರು: ಭಾರತೀಯ ಸಂಸ್ಕೃತಿ ಕಣ್ಣುಮುಚ್ಚಿ ಭಗವಂತನನ್ನು ಕಂಡಿದೆ. ಯೋಗದ ಮೂಲಕ ಕಣ್ಣುಮುಚ್ಚಿ ಭಗವಂತನ ಧ್ಯಾನ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನವಾದ ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯವಾದ ಪದ್ಧತಿ. ಜಗತ್ತಿಗೆ ಮಹತ್ತರ ಕೊಡುಗೆಯನ್ನು ದೇಶ ಕೊಟ್ಟಿದೆ. ವಿಜ್ಞಾನ, ಗಣಿತದಿಂದ ಹಿಡಿದು ಹಲವು ಕೊಡುಗೆಯಲ್ಲಿ ಯೋಗವೂ ಒಂದು ಎಂದು ತಿಳಿಸಿದರು.
ಯೋಗ ಆಧ್ಯಾತ್ಮದ ಒಂದು ಭಾಗ. ಭಾರತೀಯ ಸಂಸ್ಕೃತಿ ಕಣ್ಣುಮುಚ್ಚಿ ಭಗವಂತನನ್ನು ಕಂಡಿದೆ. ಯೋಗದ ಮೂಲಕ ಕಣ್ಣುಮುಚ್ಚಿ ಭಗವಂತನ ಧ್ಯಾನ ಮಾಡಲಾಗುತ್ತದೆ. ಉಳಿದವು ಕಣ್ಣು ಬಿಟ್ಟು ಭಗವಂತನ ಕಾಣುವ ಪ್ರಯತ್ನ ಮಾಡಲಾಗುತ್ತದೆ. ಮನಸ್ಸು ಬುದ್ಧಿಯ ಮೂಲಕ ಭಗವಂತ, ಮೋಕ್ಷವನ್ನು ಕಾಣುವ ಪದ್ಧತಿ ಯೋಗ ಎಂದು ಬಣ್ಣಿಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡಲು ಯೋಗ ಮಹತ್ವದ ಕೊಡುಗೆ ನೀಡಿದೆ. ಸಾವಿರಾರು ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಯೋಗ ಇಂದು ವಿಶ್ವ ಯೋಗದಿನವಾಗಿ ಆಚರಣೆಯಾಗುತ್ತಿದೆ. ಈ ವರ್ಷದ ಆರನೇ ವರ್ಷದ ಯೋಗ ದಿನಾಚರಣೆ ಮಾಡಲಾಗುತ್ತಿದೆ ಎಂದರು.
ಇದಕ್ಕೂ ಮೊದಲು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಯೋಗ ದಿನಕ್ಕೆ ಕಟೀಲ್ ಚಾಲನೆ ನೀಡಿದರು.
ಬಳಿಕ ನಳಿನ್, ಎಂಎಲ್ಸಿ ರವಿಕುಮಾರ್, ಬಿಜೆಪಿ ಪದಾಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಯೋಗ ಮಾಡಿದರು. ಕೊರೊನಾ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸರಳವಾಗಿ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಈ ವೇಳೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಭಾಗಿಯಾಗಿದ್ದರು. ಯೋಗ ದಿನಕ್ಕೂ ಮುನ್ನ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡಲಾಯಿತು.
ವಿಶ್ವಕ್ಕೆ ಭಾರತದ ಹೆಮ್ಮೆಯ ಕೊಡುಗೆ ಯೋಗ, ಸರ್ವರಿಗೂ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.#YogaDay2020 #YogaForAll#Internationalyogaday2020 pic.twitter.com/3NBZPXxfvp
— Nalinkumar Kateel (@nalinkateel) June 21, 2020