– ಮಲೆನಾಡಿನಲ್ಲಿ ಭರ್ಜರಿ ಮಳೆ
ಶಿವಮೊಗ್ಗ: ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಬಾರಿಯೂ ಭರ್ಜರಿ ಮಳೆಯಾಗಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಮಲೆನಾಡು ಭಾಗದಲ್ಲಿ ಸಹ ಭರ್ಜರಿ ಮಳೆಯಾಗಿದ್ದು, ಭದ್ರಾ ಜಲಾಶಯ ಸಹ ತುಂಬಿದೆ. ಹೀಗಾಗಿ 2 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದ ಭಾಗದಲ್ಲಿ ಸತತ ಮಳೆಯಾಗಿದ್ದು, ಈ ಹಿನ್ನೆಲೆ ಭದ್ರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಭದ್ರಾ ಜಲಾಶಯದಿಂದ ಇಂದು 4 ಗೇಟುಗಳು ಮೂಲಕ ಒಟ್ಟು 2,288 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಭದ್ರಾ ಎಡದಂಡೆ, ಬಲದಂಡೆ ನಾಲೆಗಳಿಗೂ ನೀರು ಹರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಭದ್ರಾ ಅಣೆಕಟ್ಟು 186 ಅಡಿ ಪೂರ್ಣ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಡ್ಯಾಂನಲ್ಲಿ 185.7 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 71,116 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಈ ಆಣೆಕಟ್ಟು ಹೊಂದಿದೆ. ಸದ್ಯ 70,012 ಟಿಎಂಸಿ ನೀರು ಸಂಗ್ರಹವಾಗಿದೆ. ನದಿಗೆ 400 ಕ್ಯೂಸೆಕ್, ಎಡದಂಡೆ ನಾಲೆಗೆ 100 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಗೆ 917 ಕ್ಯೂಸೆಕ್ ಸೇರಿದಂತೆ ಒಟ್ಟು 2,288 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.
ಇನ್ನೂ ವಿಶೇಷವೆಂಬಂತೆ ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಅಣೆಕಟ್ಟು ತುಂಬಿದೆ. ನೀರನ್ನು ಹೊರ ಬಿಡುತ್ತಿದ್ದಂತೆ ಡ್ಯಾಂನಿಂದ ಹಾಲ್ನೊರೆಯಂತೆ, ಧುಮ್ಮಿಕ್ಕುತ್ತಿದೆ. ನೀರು ಹರಿಯುವುದನ್ನು ನೋಡಲು ಹೆಚ್ಚು ಜನ ಧಾವಿಸಿದ್ದು, ಮನೋಹರ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.