-ಕೊಪ್ಪಳದಲ್ಲಿ ವಾಸ, ರಾಯಚೂರಿನಲ್ಲಿ ಕೆಲಸ
ಕೊಪ್ಪಳ/ರಾಯಚೂರು: ಕೊಪ್ಪಳದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ 27 ವರ್ಷದ ಬ್ಯಾಂಕ್ ಉದ್ಯೋಗಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಹೀಗಾಗಿ ಸೋಂಕಿತ ಕಾರ್ಯ ನಿರ್ವಹಿಸುತ್ತಿದ್ದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿಯೂ ಮತ್ತು ವಾಸವಾಗಿದ್ದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರೋಗಿ 2254 ಕೇಸೂರು ಗ್ರಾಮದ ನಿವಾಸಿಯಾಗಿದ್ದು, ಮಸ್ಕಿಯ ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಗ್ರಾಮದಿಂದ ಹೋಗಿ ಬರುತ್ತಿದ್ದರು. ಮೇ 17ರಂದು ಉದ್ಯೋಗಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. 22 ರಂದು ಕೇಸೂರು ಗ್ರಾಮದ ಪ್ರ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಸ್ಪತ್ರೆ ಸಿಬ್ಬಂದಿ ಉದ್ಯೋಗಿ ಗಂಟಲು ದ್ರವದ ಮಾದರಿಯನ್ನು ಪಡೆದು ಕೋವಿಡ್-19 ಪರೀಕ್ಷೆಗೆ ಕಳುಗಹಿಸಿದ್ದರು. ಪರೀಕ್ಷೆಯ ಬಳಿಕ ಉದ್ಯೋಗಿಯನ್ನು ಕೊಪ್ಪಳದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಇಂದು ಬಂದ ವರದಿಯಲ್ಲಿ ಉದ್ಯೋಗಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಸೋಂಕಿತ ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಹಲವು ಜನರ ಜೊತೆ ಸಂಪರ್ಕ ಹೊಂದಿದ್ದಾರೆ. ಮಸ್ಕಿಯಲ್ಲಿ ಪುರಸಭೆ ಸಿಬ್ಬಂದಿ ಬ್ಯಾಂಕ್ ಒಳಗೆ ಡಿಸ್ ಇನ್ಫೆಕ್ಷನ್ ಸ್ಪ್ರೇ ಮಾಡಿದ್ದಾರೆ. ಮಸ್ಕಿಯಲ್ಲಿ ವ್ಯಕ್ತಿ ವಾಸವಿದ್ದ ಮನೆ ಹಾಗೂ ಓಡಾಡಿದ ಜಾಗದಲ್ಲೆಲ್ಲಾ ಕೆಮಿಕಲ್ ಸ್ಪ್ರೇ ಮಾಡಲಾಗಿದೆ.
ಇತ್ತ ಸೋಂಕಿತ ವಾಸವಾಗಿದ್ದ ಕೇಸೂರು ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ. ದೋಟಿಹಾಳ ಗ್ರಾಮವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಇನ್ನು ಸೋಂಕಿತನ ಸೋದರ ಕೊಪ್ಪಳ ನಗರದ ಐಸಿಐಸಿಐ ಬ್ಯಾಂಕ್ ಗೆ ಆಗಮಿಸಿ ವ್ಯವಹಾರ ನಡೆಸಿದ್ದು, ನಗರದ ಗಂಜ್ ಸರ್ಕಲ್ ನಲ್ಲಿರುವ ಮೊಬೈಲ್ ಶಾಪ್ ನಲ್ಲಿ ವ್ಯವಹಾರ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಬ್ಯಾಂಕ್ ಉದ್ಯೋಗಿಯ ಸೋಂಕಿನ ಮೂಲ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರ ಪತ್ತೆಗಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲಾಡಳಿತ ಮುಂದಾಗಿವೆ.