ವಿಜಯಪುರ: ರಸ್ತೆಯಲ್ಲಿ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕಾರ್ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ತಂದೆ-ಮಗ ಅಚ್ಚರಿ ರೀತಿಯಲ್ಲಿ ಪಾರಾಗಿದ್ದಾರೆ.
ಕಲಬುರಗಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218ರ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಬಳಿ ಘಟನೆ ನಡೆದಿದ್ದು, ಕಲಬುರ್ಗಿ ಮೂಲದ ವಿಜಯಪುರದ ಬಿಎಲ್ ಡಿಇ ಫಾರ್ಮಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರುದ್ರಗೌಡ ಪಾಟೀಲ್ ಹಾಗೂ ಅವರ ಪುತ್ರ ಸಾಯಿ ಪ್ರಸಾದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಜೆ ಕಲಬುರಗಿಯಿಂದ ವಿಜಯಪು ರಕ್ಕೆ ಕಾರಿನಲ್ಲಿ ಬರುತ್ತಿದ್ದರು. ಆಗ ದೇವರಹಿಪ್ಪರಗಿ ಸಮೀಪದ ಹೆದ್ದಾರಿ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತ ಬೈಕ್ ನಲ್ಲಿ ಹೋಗುತ್ತಿದ್ದ ಯುವಕ ಅಡ್ಡ ಬಂದಿದ್ದಾನೆ.
ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಕಾರನ್ನು ಜೋರಾಗಿ ತಿರುಗಿಸಿದ್ದು, ರಸ್ತೆ ಬದಿ ತೆಗ್ಗಿಗೆ ಉರುಳಿದೆ. ಒಂದು ಸುತ್ತು ಪಲ್ಟಿಯಾಗಿ ಬೇವಿನ ಮರದ ಮೇಲೆ ಬಿದ್ದಿದೆ. ಈ ವೇಳೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಕಾರಣ ತಂದೆ-ಮಗ ಪ್ರಣಾಪಾಯದಿಂದ ಪಾರಾಗಿದ್ದಾರೆ.
ಕಲಬುರಗಿ ವಿದ್ಯಾನಗರದಿಂದ ವಿಜಯಪುರದ ಸಂಗನಬಸವ ಹೈಸ್ಕೂಲ್ ವಸತಿ ಶಾಲೆಗೆ ಪುತ್ರ ಸಾಯಿಪ್ರಸಾದನನ್ನು ಬಿಡಲು ತಂದೆ ರುದ್ರಗೌಡ ಪಾಟೀಲ್ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.