– ನೆಲಮಂಗಲದಲ್ಲಿ ನೀರಿಗೆ ಹಾಹಾಕಾರ
ಬೆಂಗಳೂರು: ಬೇಸಿಗೆ ಆರಂಭದ ಮುನ್ನವೇ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ತಾಲೂಕಿನ ಕೂಲಿಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ನೆಲಮಂಗಲ ನಗರಸಭೆ ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬೇಸಿಗೆ ಇನ್ನೂ ಆರಂಭವಾಗಿಲ್ಲ ಈಗಲೇ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ಕೊಳಾಯಿಯಲ್ಲಿ ಬರುವ ಒಂದೊಂದು ಹನಿ ನೀರಿಗೆ ಮಹಿಳೆಯರು, ಮಕ್ಕಳು ಬಿಸಿಲಿನಲ್ಲಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಈಗಲೇ ಎದುರಾಗಿದೆ.
ನೆಲಮಂಗಲ ನಗರಸಭೆಗೆ ಇತ್ತೀಚೆಗೆ ನಾಲ್ಕು ಗ್ರಾಮ ಪಂಚಾಯತಿಗಳು ಸೇರಿರುವ ಹಿನ್ನಲೆ ಸದಸ್ಯರು ಇಲ್ಲದ ಕಾರಣ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೆ ಕುಂಠಿತವಾಗಿದ್ದು, ಅಧಿಕಾರಿಗಳೂ ಗಮನವರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಎರಡು ದಿನಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದರೂ ಎಲ್ಲ ಮನೆಯವರಿಗೆ ಸಾಕಾಗುವಷ್ಟು ಕುಡಿಯುವ ನೀರು ಸಿಗುತ್ತಿಲ್ಲ. ಒಂದು ವರ್ಷದ ಹಿಂದೆ ಹೊಸ ಕೊಳವೆ ಬಾವಿ ಕೊರೆದಿದ್ದು, ಯಂತ್ರೋಪಕರಣಗಳನ್ನ ನೀಡುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.