– ಪಾಲಿಕೆ ಸಿಬ್ಬಂದಿಯಿಂದ ಮಾರುಕಟ್ಟೆ ತೆರವು
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 10 ದಿನಗಳ ಕಾಲ ಲಾಕ್ಡೌನ್ ಜಾರಿ ಮಾಡಲಾಗಿದೆ. ಆದರೆ ಇಂದು ಮುಂಜಾನೆ 5 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನೇ ನೆಪಮಾಡಿಕೊಂಡ ಹಲವರು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿಬಿದ್ದ ಪರಿಣಾಮ ಪಾಲಿಕೆ ಅಧಿಕಾರಿಗಳು ಮಾರುಕಟ್ಟೆಯನ್ನ ತೆರವುಗೊಳಿಸಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ಸರಾಫಗಟ್ಟಿ ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತರಕಾರಿ, ದಿನಸಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪಾಲಿಕೆ ಸಿಬ್ಬಂದಿ ಬಿಸಿ ಮುಟ್ಟಿಸಿದ್ದು, ತರಕಾರಿ ವ್ಯಾಪಾರವನ್ನು ತೆರವುಗೊಳಿಸಿದ್ದಾರೆ.
ಪ್ರತಿನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಮಾರುಕಟ್ಟೆಯೂ ಲಾಕ್ಡೌನ್ ಸಂದರ್ಭದಲ್ಲಿ ಬೆಳ್ಳಂಬೆಳಗ್ಗೆ ಜನದಟ್ಟಣೆಯಿಂದ ಕೂಡಿತ್ತು. ಅಲ್ಲದೇ ಯಾವ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡದ ಪರಿಣಾಮ ಪಾಲಿಕೆ ಅಧಿಕಾರಿಗಳು ಮಾರುಕಟ್ಟೆ ತೆರವುಗೊಳಿಸಿದರು. ಪಾಲಿಕೆ ಸಿಬ್ಬಂದಿ ಸೂಚನೆ ನೀಡುತ್ತಿದ್ದಂತೆ ವ್ಯಾಪಾರಸ್ಥರು ಆಟೋ ಟ್ರ್ಯಾಕ್ಟರ್ ಗಳಲ್ಲಿ ತರಕಾರಿ ತುಂಬಿಕೊಂಡು ಹೋದರು.