– ನಾವು ಬರೋವರೆಗೆ ಶವ ಕೆಳಗಿಳಿಸದಂತೆ ಕುಟುಂಬಸ್ಥರ ಸೂಚನೆ
ಕೋಲಾರ: ಪ್ರೇಮ ವೈಫಲ್ಯದಿಂದ ಪಶುವೈದ್ಯನೊಬ್ಬ ಲಾಡ್ಜ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಕೋಲಾರ ನಗರದ ಅಂಜನಾದ್ರಿ ಲಾಡ್ಜ್ನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಮೂಲದ ಡಾ.ದರ್ಶನ್ ಆತ್ಮಹತ್ಯೆ ಮಾಡಿಕೊಂಡ ಪಶುವೈದ್ಯ. ಮೃತ ದರ್ಶನ್ ಕೋಲಾರ ಹಾಲು ಒಕ್ಕೂಟದಲ್ಲಿ ಪಶುವೈದ್ಯನಾಗಿ ಕೆಲಸ ಮಾಡುತ್ತಿದ್ದನು. ಜೂನ್ 20 ರಂದು ಕೋಲಾರದ ಅಂಜನಾದ್ರಿ ಲಾಡ್ಜ್ಗೆ ಬಂದು ರೂಮ್ ಪಡೆದು ಸಂಜೆ ಹೊತ್ತಿಗೆ ನೇಣಿಗೆ ಶರಣಾಗಿದ್ದಾನೆ.
ಸಂಜೆ ವೇಳೆ ಲಾಡ್ಜ್ ಮಾಲೀಕರ ಗಮನಕ್ಕೆ ಬಂದ ಕೂಡಲೇ ಅವರು ಕೋಲಾರ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅವರ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಆದರೆ ಕುಟುಂಬಸ್ಥರು ನಾವು ಬರುವವರೆಗೆ ಶವ ಕೆಳಗಿಳಿಸದಂತೆ ಸೂಚಿಸಿದ್ದರು. ಪರಿಣಾಮ ಸೋಮವಾರ ಅವರ ಕುಟುಂಬಸ್ಥರು ಬಂದ ನಂತರ ಲಾಡ್ಜ್ನ ಬಾಗಿಲು ಒಡೆದು ಶವ ಕೆಳಗಿಳಿಸಲಾಗಿದೆ. ಈ ವೇಳೆ ದರ್ಶನ್ ಬಳಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ.
ದರ್ಶನ್ ಒಂದೂವರೆ ವರ್ಷದ ಹಿಂದೆ ಕೋಚಿಮುಲ್ ಹಾಲು ಒಕ್ಕೂಟಕ್ಕೆ ಸಹಾಯಕ ವ್ಯವಸ್ಥಾಪಕರಾಗಿ ಬಂದಿದ್ದನು. ಇದಕ್ಕೂ ಮೊದಲು ಬೆಳಗಾವಿ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಿದ್ದನು. ಕೋಲಾರ ಹೊರವಲಯದಲ್ಲಿರುವ ಗದ್ದೆ ಕಣ್ಣೂರಿನಲ್ಲಿ ಸ್ನೇಹಿತನ ಜೊತೆ ರೂಮ್ ಮಾಡಿಕೊಂಡಿದ್ದನು. ದರ್ಶನ್ ವ್ಯಾಸಂಗ ಮಾಡುತ್ತಿದ್ದ ವೇಳೆ ಮಂಡ್ಯ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಸುಮಾರು ಎಂಟು ವರ್ಷಗಳ ಕಾಲ ಪ್ರೀತಿ ಮಾಡಿದ್ದಾರೆಂದು ತಿಳಿದುಬಂದಿದೆ.
ಇತ್ತೀಚಿಗೆ ಆತನ ಲವ್ ಬ್ರೇಕಪ್ ಆದ ಮೇಲೆ ದರ್ಶನ್ ಖಿನ್ನತೆಗೆ ಒಳಗಾಗಿದ್ದನು. ಶನಿವಾರ ರೂಮಿನಿಂದ ಹೊರಗೆ ಹೋದ ದರ್ಶನ್ ಭಾನುವಾರ ಗ್ರಹಣವಿದೆ. ನಾನು ಸೋಮವಾರ ಬರುತ್ತೇನೆ ಎಂದು ರೂಮಿನ ಸ್ನೇಹಿತನಿಗೆ ಹೇಳಿ ಹೋದವನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಲಾಡ್ಜ್ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ಒಂದು ವಾರದ ಹಿಂದೆಯಷ್ಟೇ ಊರಿಗೆ ಹೋಗಿ ಕಾಲ ಕಳೆದು ಬಂದಿದ್ದನು. ಆದರೆ ಲವ್ ಬ್ರೇಕ್ನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೋಚಿಮುಲ್ ವ್ಯವಸ್ಥಾಪಕ ಶ್ರೀನಿವಾಸಗೌಡ ಹೇಳಿದ್ದಾರೆ.