– ದೀಪೋತ್ಸವಕ್ಕೆ ಹೊರಗಿನವರಿಗೆ ಅವಕಾಶವಿಲ್ಲ
ಲಕ್ನೋ: ದೀಪಾವಳಿಯ ಅಂಗವಾಗಿ ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಭರದಿಂದ ಸಿದ್ಧತೆ ನಡೆಯಲಿದ್ದು, ಸರಯು ನದಿ ದಡದ 28 ಘಾಟ್ಗಳಲ್ಲಿ 5.51 ಲಕ್ಷ ಹಣತೆಗಳನ್ನು ಹಚ್ಚಲಾಗುತ್ತಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಸರಯು ನದಿ ದಡದ 28 ಘಾಟ್ಗಳಲ್ಲಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬರೋಬ್ಬರಿ 5.51 ಲಕ್ಷ ಹಣತೆಗಳನ್ನು ಹಚ್ಚಲಾಗುತ್ತಿದೆ. ಅಲ್ಲದೆ ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ರಾಮಜನ್ಮಭೂಮಿಯಲ್ಲಿನ ರಾಮಲಲ್ಲಾಗೆ ನಮಸ್ಕರಿಸಿ, ರಾಮ್ ಕಿ ಪೈಡಿಯಲ್ಲಿ ದೀಪಗಳನ್ನು ಬೆಳಗಿಸಲಿದ್ದಾರೆ.
ನವೆಂಬರ್ 13ರಂದು ಸರಯುವಿನ 28 ಘಾಟ್ಗಳಲ್ಲಿ ಬರೋಬ್ಬರಿ 5.51 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಆಡಳಿತ ಮಂಡಳಿ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದೆ. ಈ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅಯೋಧ್ಯೆಯಲ್ಲಿ ಸಂಭ್ರವನ್ನು ಹೆಚ್ಚಿಸುವಂತೆ ಕರೆ ನೀಡಿದ್ದಾರೆ.
ಹೊರಗಿನಿಂದ ಬರುವವರಿಗೆ ಈ ದೀಪೋತ್ಸವಕ್ಕೆ ಅನುಮತಿ ಇಲ್ಲ. ಜನರು ತಮ್ಮ ಮನೆಗಳಿಂದ ದೀಪಗಳನ್ನು ತಂದು ರಾಮ್ ಕಿ ಪೈಡಿಯಲ್ಲಿ ಬೆಳಗಿಸಲು ತಿಳಿಸಲಾಗಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ನಾಲ್ಕನೇ ದೀಪೋತ್ಸವ ಇದಾಗಿದೆ. ಕಳೆದ ಬಾರಿಯ ದೀಪಾವಳಿ ಸಂದರ್ಭದಲ್ಲಿ 4.10 ಲಕ್ಷ ದೀಪವನ್ನು ಬೆಳಗಿಸುವ ಮೂಲಕ ಅಯೋಧ್ಯೆ ಆಡಳಿತ ಮಂಡಳಿ ವಿಶ್ವ ದಾಖಲಿ ನಿರ್ಮಿಸಿತ್ತು. ದೀಪೋತ್ಸವ ಮಾತ್ರವಲ್ಲ ಕಾರ್ತಿಕ ಕುಂಭ ಮೇಳ, ಪಂಚ ಕೋಶಿ ಹಾಗೂ 14 ಕೋಶಿ ಪರಿಕ್ರಮಗಳಂತಹ ಇತರ ಆಕರ್ಷಣೆಯ ಆಚರಣೆಗಳ ಸಂದರ್ಭದಲ್ಲಿ ಹೊರಗಿನವರಿಗೆ ಅವಕಾಶ ಇರುವುದಿಲ್ಲ ಎಂದು ಅಲ್ಲಿನ ಅಧಿಕಾರಿ ತಿಳಿಸಿದ್ದಾರೆ.
ನವೆಂಬರ್ 11ರಿಂದಲೇ ಅಯೋಧ್ಯೆಯ ಗಡಿ ಸೀಲ್ ಆಗಲಿದೆ. ಈ ವಿಶೇಷ ಆಚರಣೆಗಳಲ್ಲಿ ಸ್ಥಳೀಯರು ಮಾತ್ರ ಭಾಗವಹಿಸಲಿದ್ದಾರೆ. ಈ ವರ್ಷದ ದೀಪೋತ್ಸವ, ಕಾರ್ತಿ ಪೂರ್ಣಿಮೆ ಹಾಗೂ ಇತರೆ ಹಬ್ಬಗಳ ಸಂದರ್ಭದಲ್ಲಿ ಹೊರಗಿನವರಿಗೆ ಅವಕಾಶವಿರುವುದಿಲ್ಲ. ಈ ಕಾರ್ಯಕ್ರಮಗಳನ್ನು ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಅಯೋಧ್ಯೆಯ ವಿಭಾಗೀಯ ಆಯುಕ್ತ ಎಂ.ಪಿ.ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುವ ಐದು ದಿನಗಳ ದೀಪೋತ್ಸವ ನವೆಂಬರ್ 12ಕ್ಕೆ ಆರಂಭವಾಗುತ್ತದೆ. ನವೆಂಬರ್ 13ರಂದು ಪ್ರಮುಖ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಾಗುತ್ತದೆ. ನವೆಂಬರ್ 30ರ ವರೆಗೆ ಅಂದರೆ ಕಾರ್ತಿಕ ಪೂರ್ಣಿಮೆ ಮಗಿಯುವ ವರೆಗೆ ಇತರ ಕಾರ್ಯಕ್ರಮಗಳು ನಡೆಯಲಿವೆ.