ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ.
ಬಂಧಿತರನ್ನು ತಮಿಳುನಾಡು ಮೂಲದ ಅಹಮ್ಮದ್ ಅಬ್ದುಲ್ ಖದೀರ್ (40) ಮತ್ತು ಬೆಂಗಳೂರಿನ ಇರ್ಫಾನ್ ನಾಸೀರ್ (33) ಎಂದು ಗುರುತಿಸಲಾಗಿದೆ. ಈ ಇಬ್ಬರು ಬೆಂಗಳೂರು ಮತ್ತು ಚೆನ್ನೈನಲ್ಲಿ ಐಸಿಸ್ ಉಗ್ರ ಸಂಘಟನೆಗಾಗಿ ದೇಣಿಗೆ ಮೂಲಕ ಹಣ ಸಂಗ್ರಹಿಸುತ್ತಿದ್ದರು ಮತ್ತು ಯುವಕರನ್ನು ಉಗ್ರ ಸಂಘಟನೆಗೆ ಸೇರಿಕೊಳ್ಳುವಂತೆ ಪ್ರೇರೆಪಿಸುತ್ತಿದ್ದರು ಎಂದು ಎನ್ಐಎ ಹೇಳಿದೆ.
ತಮಿಳುನಾಡಿನ ಚೆನ್ನೈ ಮೂಲದ ಅಹಮ್ಮದ್ ಅಬ್ದುಲ್ ಖದೀರ್ ಚೆನ್ನೈನಲ್ಲಿ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಇರ್ಫಾನ್ ನಾಸೀರ್ ಅಕ್ಕಿ ವ್ಯಾಪಾರಿಯಾಗಿದ್ದ. ಈ ಇಬ್ಬರನ್ನು ಬೆಂಗಳೂರಿನ ಗುರಪ್ಪನ ಪಾಳ್ಯ ಮತ್ತು ಫ್ರೇಜರ್ ಟೌನಿನಲ್ಲಿ ಪ್ರತ್ಯೇಕವಾಗಿ ಬಂಧಿಸಲಾಗಿದೆ. ಬಂಧಿತರಿಂದ ಬಾಂಬ್ ತಯಾರಿಸಲು ಬಳಸುತ್ತಿದ್ದ ಎಲೆಕ್ಟ್ರಿಕ್ ಸಾಧನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಇಬ್ಬರು ಸೇರಿಕೊಂಡು ಹಣವನ್ನು ಸಗ್ರಹಿಸಿವುದಲ್ಲದೇ ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದನೆ ಮಾಡಿ ಅವರು ಸಿರಿಯಾಗೆ ಹೋಗಲು ಸಹಾಯ ಕೂಡ ಮಾಡುತ್ತಿದ್ದರು. ಇಂದು ಈ ಇಬ್ಬರನ್ನು ಅರೆಸ್ಟ್ ಮಾಡಿರುವ ಎನ್ಐಎ ಅಧಿಕಾರಿಗಳು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ವಿಚಾರಣೆ ನಡೆಸಲು ಕಸ್ಟಡಿಗೆ ತೆಗೆದುಕೊಂಡಿದೆ.