ಚಿಕ್ಕಬಳ್ಳಾಪುರ: ಫೈಬರ್ ವಸ್ತುಗಳ ಸಂಗ್ರಹಣೆ ಮಾಡಿದ್ದ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ-ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾರಿವಾಳಗುಟ್ಟದ ಬಳಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಫೈಬರ್ ವಸ್ತುಗಳನ್ನು ಸಂಗ್ರಹ ಮಾಡಲಾಗಿದ್ದ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಹಬ್ಬಿ, ದಟ್ಟ ಹೊಗೆ ಆವರಿಸಿದೆ. ಆಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.
ವಸ್ತು ಸಂಗ್ರಹಾಲಯದ ನಿರ್ಮಾಣಕ್ಕೆ ಬಳಸುವ ಫೈಬರ್ ವಸ್ತುಗಳ ಗೋದಾಮು ಎಂದು ತಿಳಿದು ಬಂದಿದೆ. ಈ ಗೋದಾಮು ಯಾರಿಗೆ ಸೇರಿದ್ದು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ದೇವನಹಳ್ಳಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.