ಯಾದಗಿರಿ: ಜಿಲ್ಲೆಯ ಶಹಪುರ ತಾಲೂಕಿನ ಬೇವಿನಾಳ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ರಸ್ತೆಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ, ಸರಿಯಾದ ಊಟದ ವ್ಯವಸ್ಥೆ ಇಲ್ಲದೆ ಪಿಯುಸಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹೀಗಿದ್ದರೂ ವಾರ್ಡನ್ ಸುಮಮಂಗಲ ನಿರ್ಲಕ್ಷ್ಯ ಧೋರಣೆಯನ್ನು ತಾಳಿದ್ದಾರೆ. ಇದರಿಂದಾಗಿ ಬೇಸರಗೊಂಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲ್ನಡಿಗೆಯಲ್ಲಿ ಜಿಲ್ಲಾಕೇಂದ್ರಕ್ಕೆ ಬರಲು ಯತ್ನಿಸಿದ್ದಾರೆ.
ವಿದ್ಯಾರ್ಥಿಗಳನ್ನು ರಸ್ತೆ ಮಧ್ಯೆಯೇ ಶಾಲಾ ಸಿಬ್ಬಂದಿ ತಡೆದ ಹಿನ್ನೆಲೆ ಶಹಪುರ ತಾಲೂಕಿನ ದೋರನಹಳ್ಳಿ ಬಳಿಯ ಮುಖ್ಯ ರಸ್ತೆಯಲ್ಲಿ ಧರಣಿ ಕೂರುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ತಮ್ಮ ಕಷ್ಟಗಳನ್ನು ಆಲಿಸುವವರಿಗೂ, ಪ್ರತಿಭಟನೆ ಕೈ ಬಿಡುವ ಮಾತೇ ಇಲ್ಲ ಅಂತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.