ವಿಜಯಪುರ: ಬಿಜೆಪಿ ಹುಟ್ಟಿಸಿದ ಕೂಸಿಗೆ ಕಾಂಗ್ರೆಸ್ ತಂದೆಯಾಗಲು ಹೊರಟಿದೆ ಎಂದು ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್ ವ್ಯಂಗ್ಯವಾಡಿದರು.
ವಿಜಯಪುರ ನಗರದಲ್ಲಿಂದು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಫುಡ್ ಪಾರ್ಕ್ ನಿರ್ಮಾಣಕ್ಕೆ ಈ ಹಿಂದೆಯೇ ಜಿಲ್ಲೆಯ ರೈತ ಮುಖಂಡರೊಂದಿಗೆ ಚರ್ಚೆ ಮಾಡಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಿದ್ದೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಬಳಿಕ ಕೃಷಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಗ ನನ್ನ ಮನೆಗೆ ಬಂದು ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ವಿಶೇಷವಾಗಿ ನನ್ನ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಯೋಜನೆಯಾದ್ದರಿಂದ ನಾನೂ ವಿಶೇಷವಾಗಿ ಕಾಳಜಿ ವಹಿಸಿದ್ದೆ. ಆದರೆ ಕೆಲವರು ಅದನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಇದು ಯಾರದೋ ಕೂಸಿಗೆ ಯಾರೋ ಹೆಸರಿಟ್ಟಿಂತೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಲೇವಡಿ ಮಾಡಿದರು.
ಇನ್ನು ನಾವು ಹುಟ್ಟಿಸಿದ ಕೂಸಿಗೆ ನಾವೇ ಹೆಸರಿಡಬೇಕು. ನಾಮಕರಣಕ್ಕೆ ನಾವೇ ಕರೆಯುತ್ತೇವೆ. ಬೇಕಾದರೆ ಬರಲಿ, ಅದನ್ನು ಬಿಟ್ಟು ನಮ್ಮ ಕೂಸಿಗೆ ಕಾಂಗ್ರೆಸ್ ನವರು ಹೆಸರಿಡಲು ಓಡಾಡುತ್ತಿರುವುದು ಹಾಸ್ಯಸ್ಪದ ಎಂದರು.
ಸಿಂದಗಿ ಮತಕ್ಷೇತ್ರದ ಉಪಚುನಾವಣೆ ಕುರಿತು ಮಾತನಾಡುತ್ತಾ, ಸಿಂದಗಿ ನನ್ನ ತವರು ಕ್ಷೇತ್ರ. ಹುಟ್ಟಿ ಬೆಳೆದಿದ್ದು ಸಿಂದಗಿಯಲ್ಲೇ. ನಮ್ಮ ತಂದೆ ತೀರಿದ ಬಳಿಕ ವಿಜಯಪುರಕ್ಕೆ ಬಂದೆ. ಮೂವರು ಸಹೋದರರು ಹಾಗೂ ಅಕ್ಕ ವಿಜಯಪುರಕ್ಕೆ ಬಂದೆವು. ನಮ್ಮ ಆಸ್ತಿ ಸಿಂದಗಿಯಲ್ಲಿದೆ. ಅಲ್ಲಿನವರು ಅಭಿಮಾನದಿಂದ ಸನ್ಮಾನ ಮಾಡಿದರು. ಮೆರವಣಿಗೆ ಮಾಡುತ್ತಾರೆಂದು ಅನ್ನಿಸಿರಲಿಲ್ಲ. ಅವರ ಅಭಿಮಾನಕ್ಕೆ ಋಣಿಯಾಗಿದ್ದೇನೆ, ನನಗೆ ಸಿಂದಗಿ ಮತಕ್ಷೇತ್ರದ ಕುರಿತು ಒಲವಿಲ್ಲ, ಹೈಕಮಾಂಡ್ ಕಳುಹಿಸಿದರೆ ಅವರ ಹೇಳಿಕೆಗೆ ನಾನು ಬದ್ಧ ಎಂದು ಸ್ಪರ್ಧೆ ವಿಚಾರಕ್ಕೆ ಅಡ್ಡ ಗೋಡೆ ಮೇಲೆ ದೀಪ ಇಟ್ಟರು.