ಶಿವಮೊಗ್ಗ: ಕೋವಿಡ್ ಮೂರನೇ ಅಲೆ ಬರುತ್ತದೋ, ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾಗ್ತಾರೋ, ಇರ್ತಾರೋ ಗೊತ್ತಿಲ್ಲ. ಆದರೆ ಕಾರ್ಯಕರ್ತರು, ತಮ್ಮ ನಿಷ್ಠೆ, ಸಿದ್ದಾಂತವನ್ನ ಸಂಘಟನೆಗೆ ತೋರಿಸಿ ಬೆಳೆಸಬೇಕಿದೆ ಎಂದು ಸಚಿವ ಈಶ್ವರಪ್ಪ ಕರೆ ನೀಡಿದ್ದಾರೆ.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಪಕ್ಷದ ಒಳಗೂ ಟೀಕೆ ಮಾಡುವ ಬೆಳವಣಿಗೆ ನಮ್ಮ ಪಕ್ಷದಲ್ಲೂ ಬಂದು ಬಿಟ್ಟಿದೆ. ಪಕ್ಷದ ಒಳಗಿರುವವರು ಟೀಕೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಎಂದೂ ಇರಲಿಲ್ಲ. ಇದನ್ನು ನಾನು ನೊಂದು ಹೇಳುತ್ತಿದ್ದೇನೆ ಎಂದರು.
ಸಂಘಟನೆ ಶಕ್ತಿ ಬೆಳೆಸಿಕೊಂಡು ಹೋಗುತ್ತಿದ್ದರೆ, ಎಂದಿಗೂ ನಮ್ಮ ಪಕ್ಷಕ್ಕೆ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ನ ಬಡಿದಾಟ ಇರಬಹುದು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇರಬಹುದು. ಯಾರೂ ಏನೇ ಮಾತನಾಡಿದರೂ ಪರವಾಗಿಲ್ಲ. ಕಾರ್ಯಕರ್ತರು ಸಂಘಟನೆ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ಮಾತ್ರ ಯೋಚಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ: ಸಚಿವ ಮಾಧುಸ್ವಾಮಿ
ಯಾರಾದರೂ ಟೀಕೆ ಮಾಡಲಿ, ಏನಾದರೂ ಮಾತನಾಡಿಕೊಂಡು ಹೋಗಲಿ. ಪಕ್ಷದ ಒಳಗೆ ಇರಲಿ, ಹೊರಗೆ ಆರೋಪ ಮಾಡಲಿ. ವಿರೋಧಿಗಳ ಟೀಕೆಗೆ ಸಂಘಟನೆ ಮೂಲಕವೇ ಉತ್ತರ ನೀಡಬೇಕು. ಸಂಘಟನೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕರ್ತರು ಗಮನ ಕೇಂದ್ರಿಕರಿಸಬೇಕು. ಕೋವಿಡ್ ನಂತಹ ಸಂಕಷ್ಟವನ್ನು ನಾವು ಸಂಘಟನೆ ಮುಖಾಂತರ ಜಾಗೃತಿ ಮೂಡಿಸಿ ಎದುರಿಸಿದ್ದೇವೆ ಎಂದು ತಿಳಿಸಿದರು.