ಬೆಂಗಳೂರು: ರಾಜ್ಯದ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಇಂದು ನಗರದ ಹೋಟೆಲಿನಲ್ಲಿ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಉತ್ತರ ಸಿಗಲಿದೆ.
ಹೋಟೆಲ್ ದಿ ಕ್ಯಾಪಿಟಲ್ ನಲ್ಲಿ ಇಂದು ಸಂಜೆ 7 ಗಂಟೆಗೆ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಶಾಸಕಾಂಗ ಸಭೆಯ ಹಿನ್ನೆಲೆಯಲ್ಲಿ ಹೋಟೆಲ್ ಕ್ಯಾಪಿಟಲ್ ನಲ್ಲಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ವೀಕ್ಷಕರಾಗಿ ನೇಮಕವಾಗಿರುವ ಸಚಿವರಾದ ಧರ್ಮೇಂದ್ರ ಪ್ರದಾನ್ ಮತ್ತು ಕಿಶನ್ ರೆಡ್ಡಿ ಸಭೆಯಲ್ಲಿ ಭಾಗಿಯಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಇದನ್ನೂ ಓದಿ : ಯಡಿಯೂರಪ್ಪನವರ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದೆ: ಅರುಣ್ ಸಿಂಗ್
ಯಾಕೆ ಈ ಹೋಟೆಲ್?
ಇದೇ ಕ್ಯಾಪಿಟಲ್ ಹೋಟೆಲ್ ನಲ್ಲೇ ಕಳೆದ ಬಾರಿ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ರಾಜಭವನದ ಪಕ್ಕದಲ್ಲೇ ಇರುವ ಹೋಟೆಲಿನಲ್ಲಿ ಸಭೆ ನಡೆಯಲಿರುವ ಕಾರಣ ಇಂದೇ ಪ್ರಕ್ರಿಯೆ ಮುಗಿದು ನೂತನ ಸಿಎಂ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅನುಮತಿ ಕೇಳುವ ಸಾಧ್ಯತೆಯಿದೆ.