ಬೆಂಗಳೂರು: ಬಿಗ್ ಬಾಸ್ ಸೀಸನ್ 8 ನಾಳೆಗೆ ಅಂತ್ಯವಾಗಲಿದೆ. ಈ ವಿಚಾರವನ್ನು ಬಿಗ್ ಬಾಸ್ ಪ್ರಸಾರವಾಗುವ ಕಲರ್ಸ್ ಕನ್ನಡ ಚಾನೆಲ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಖಚಿತಪಡಿಸಿದ್ದಾರೆ. ತಮ್ಮ ಫೇಸ್ಬುಕ್ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು ಯಾಕೆ ಈ ಶೋವನ್ನು ಅರ್ಧದಲ್ಲೇ ನಿಲ್ಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು..?
ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ.
ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ.
View this post on Instagram
ಬಿಗ್ಬಾಸ್ ಮನೆಯಲ್ಲಿ ಅರವಿಂದ್ ಕೆ.ಪಿ., ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ ಇದ್ದರು. ಇವರೆಲ್ಲರಿಗೂ ಈಗ ನಿರಾಸೆ ಉಂಟಾಗಿದೆ. ಬಿಗ್ಬಾಸ್ ಕನ್ನಡದ ಇತಿಹಾಸದಲ್ಲಿ ಈ ರೀತಿ ಒಂದು ಸೀಸನ್ ಅರ್ಧಕ್ಕೆ ನಿಂತಿದ್ದು ಇದೇ ಮೊದಲು. ಕಳೆದ ವರ್ಷ ಮಲಯಾಳಂ ಬಿಗ್ಬಾಸ್ ಶೋವನ್ನು ಕೂಡ ಇದೇ ರೀತಿ ಕೋವಿಡ್ ಕಾರಣಕ್ಕಾಗಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದು ಈಗ ಕನ್ನಡದಲ್ಲೂ ಅದು ಮರುಕಳಿಸಿದೆ. ಏಪ್ರಿಲ್ನಲ್ಲಿ ಆರಂಭಗೊಂಡಿದ್ದ ಐಪಿಎಲ್ ಸೀಸನ್ 14 ಕೂಡ ಕೊರೊನಾ ಕಾರಣದಿಂದ ರದ್ದಾಗಿತ್ತು. ಈಗ ಬಿಗ್ಬಾಸ್ ಕೂಡ ಅದೇ ಹಾದಿ ಹಿಡಿದಿದೆ.