– ನೌಕರರಿಗೆ ಶೀಘ್ರವೇ ಕೊರೊನಾ ಟೆಸ್ಟ್
ಬೆಂಗಳೂರು: ಸಾರಿಗೆ ನೌಕರರ ನಾಲ್ಕು ದಿನದ ಮುಷ್ಕರ ಮುಗಿಯಿತು. ಬಸ್ ಬಂದ್ ಏನೋ ಕೊನೆಯಾಯ್ತು. ಆದರೆ ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರಿಗೆ ಸಂಕಷ್ಟಗಳು ಎದುರಾಗ್ತಿವೆ. ಮತ್ತೊಂದೆಡೆ ಸರ್ಕಾರ ನೌಕರರ ಸಮಸ್ಯೆ ಆಲಿಸಲು ಸಮಿತಿ ರಚಿಸಿದೆ.
ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಅನ್ನೋ ರೀತಿ ಸಾರಿಗೆ ನೌಕರರ ಪ್ರತಿಭಟನೆ ಏನೋ ಕೊನೆಯಾಗಿದೆ. ನೌಕರಗಳು ಸಹ ಡ್ಯೂಟಿಗೆ ಹಾಜರಾಗಿದ್ದಾರೆ. ಆದರೆ ನಾಲ್ಕು ದಿನದ ಪ್ರತಿಭಟನೆಗೆ ಹಾಜರಾದ ನೌಕರರಿಗೆ ವೇತನವಿಲ್ಲ. ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನವಿಲ್ಲ ಎಂಬ ನಿಯಮವಿದೆ. ಹೀಗಾಗಿ ನೌಕರರಿಗೆ ಸಂಬಳ ನೀಡುವುದಿಲ್ಲವೆಂದು ಬಿಎಂಟಿಸಿ ಸಂಚಾರ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಹೇಳಿದ್ದಾರೆ.
ಪ್ರತಿಭಟನೆ ನಡೆಯುವ ವೇಳೆ ಹೆಚ್ಚು ಜನ್ರು ಸೇರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲ್ಲ, ಮಾಸ್ಕ್ ಹಾಕಲ್ಲ. ಹೀಗಾಗಿ ಕೊರೊನಾ ಟೆಸ್ಟ್ ಅಗತ್ಯ. ಬಿಎಂಟಿಸಿ, ಕೆಎಸ್ಆರ್ಟಿಸಿ ಜೊತೆ ಮಾತುಕತೆ ನಡೆಸತ್ತೇವೆ. ಟೆಸ್ಟ್ ಮಾಡಿ ಅಂತ ಲಿಸ್ಟ್ ಕೊಟ್ಟರೆ ನಾವ್ ರೆಡಿ ಅಂತ ಬಿಬಿಎಂಪಿ ಕಮಿಷನರ್ ತಿಳಿಸಿದ್ದಾರೆ.
ಸಾರಿಗೆ ನೌಕರರ ಸಮಸ್ಯೆ ಆಲಿಸಿ, ಪ್ರಸ್ತಾವನೆ ಸಲ್ಲಿಸಲು ಸರ್ಕಾರದಿಂದ ಸಮಿತಿ ರಚನೆಯಾಗಿದೆ. ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ಅಧ್ಯಕ್ಷತೆಯಲ್ಲಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಎಂಡಿ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕರ ಒಳಗೊಂಡ ಐದು ಜನ ಅಧಿಕಾರಿಗಳ ಸಮಿತಿ ರಚಿಸಿದೆ. ಸಾರಿಗೆ ಸಂಸ್ಥೆಯ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ, ಅಂತರ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ಘಟಕ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ರೂಪಿಸುವ ಕುರಿತು ಈ ಕಮಿಟಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸಾರಿಗೆ ನೌಕರರು ಮುಷ್ಕರ ಕೈ ಬಿಡಲು, ಸರ್ಕಾರ 9 ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ನೌಕರರ 9 ಬೇಡಿಕೆಗಳಲ್ಲಿ ಈ ಮೂರು ಇದ್ದವು.
ಒಟ್ಟಿನಲ್ಲಿ ಸಾರಿಗೆ ನೌಕರರು ಒಂದೆಡೆ ವೇತನ ಕಡಿತ ಹಾಗೂ ಕೊರೊನಾ ಪರೀಕ್ಷೆ ಎರಡನ್ನೂ ಎದುರಿಸಬೇಕಿದೆ.