ಯಾದಗಿರಿ: ಬಸವ ಸಾಗರ ಜಲಾಶಯ ಭರ್ತಿ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಜಲಾಶಯದಿಂದ ಏಕಾಏಕಿ 28,480 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಬಸವ ಸಾಗರ ಜಲಾಶಯ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿದೆ. ಜಲಾಶಯದ 25 ಗೇಟ್ಗಳ ಪೈಕಿ ನಾಲ್ಕು ಗೇಟ್ ಓಪನ್ ಮಾಡಲಾಗಿದೆ. ನಾಲ್ಕು ಗೇಟ್ಗಳ ಮೂಲಕ ಜಲಾಶಯದಿಂದ 28 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹೋಗುತ್ತಿದೆ.
ಕೃಷ್ಣಾ ನದಿಯಿಂದ ಬಸವ ಸಾಗರ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮೊದಲಿಗೆ ಎರಡು ಗೇಟ್ ಓಪನ್ ಮಾಡುವ ಮೂಲಕ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ಆದರೆ ಒಂದೇ ಗಂಟೆ ಅಂತರದಲ್ಲಿ ಎರಡು ಬಾರಿ ಜಲಾಶಯದಿಂದ ನೀರು ಹೊರಗೆ ಬಂದಿದೆ. ಇದರಿಂದ ಜಿಲ್ಲೆಯ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ಹೀಗಾಗಿ ಮತ್ತೆ ಜಲಾಶಯದ ಎರಡು ಗೇಟ್ ಓಪನ್ ಮಾಡಲಾಗಿದೆ. ಈಗ ಒಟ್ಟು ನಾಲ್ಕು ಗೇಟ್ ಮೂಲಕ ನೀರು ಹೊರಕ್ಕೆ ಹೋಗುತ್ತಿದೆ.
ಪ್ರಸ್ತುತ ನಾಲ್ಕು ಗೇಟ್ಗಳ ಮೂಲಕ 28,480 ಕ್ಯೂಸೆಕ್ ನೀರು ಜಲಾಶಯದಿಂದ ಹೊರಕ್ಕೆ ಹೋಗುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ತೀವ್ರ ನಿಗಾ ಇಡಲಾಗಿದೆ. ಒಂದು ವೇಳೆ ಜಲಾಶಯದಲ್ಲಿ ನೀರು ಹೆಚ್ಚಾದರೆ ಮತ್ತೆ ಗೇಟ್ ಓಪನ್ ಮಾಡಿ ನೀರನ್ನು ಹೊರಗೆ ಬಿಡುವ ಸಾಧ್ಯತೆ ಇದೆ.