ಬೆಂಗಳೂರು/ಬೀದರ್: ಕೆ.ಆರ್ ಪೇಟೆ ಹಾಗೂ ಶಿರಾ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಎರಡು ಕ್ಷೇತ್ರವನ್ನು ಗೆದ್ದ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜೇಯಂದ್ರ ಇದೀಗ ಉತ್ತರದಲ್ಲೂ ಉಪಚುನಾವಣಾ ಯಾಗ ಮಾಡಲು ಮುಂದಾಗಿದ್ದಾರೆ.
ಉತ್ತರದ ಮಸ್ಕಿ, ಬಸವಕಲ್ಯಾಣಗಳತ್ತ ವಿಜಯೇಂದ್ರ ಚಿತ್ತ ಹರಿಸಿದ್ದು, ಉತ್ತರದ ಕ್ಷೇತ್ರಗಳಲ್ಲೂ ಕಮಾಲ್ ಮಾಡ್ತಾರಾ ಎಂಬ ಕುತೂಹಲ ಮೂಡಿದೆ. ಈ ಮೂಲಕ ತಮ್ಮ ಹ್ಯಾಟ್ರಿಕ್ ಗೆಲುವನ್ನು ಉತ್ತರ ಕರ್ನಾಟಕದಲ್ಲಿ ದಕ್ಕಿಸಿಕೊಳ್ತಾರಾ?, ಮಸ್ಕಿ, ಬಸವಕಲ್ಯಾಣ ಗೆಲ್ಲಲು ವಿಜಯೇಂದ್ರ ತಂತ್ರಗಾರಿಕೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ.
ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳಿಗೆ ಈಗಿನಿಂದಲೇ ಅಖಾಡ ಸಿದ್ಧವಾಗ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಆರಂಭದಿಂದಲೇ ತಾಲೀಮು ನಡೆಸಲು ಶುರು ಮಾಡಿದೆ. ಉತ್ತರದ ಕ್ಷೇತ್ರಗಳನ್ನು ಗೆಲ್ಲಲು ವಿಜಯೇಂದ್ರ ಅಲ್ಲೇ ಮೊಕ್ಕಾಮು ಹೂಡಿದ್ದಾರೆ. ಕೆ.ಆರ್.ಪೇಟೆ, ಶಿರಾ ಮಾದರಿಯ ತಂತ್ರಗಾರಿಕೆಗಳಿಗಿಂತ ವಿಭಿನ್ನ ಸ್ಟ್ರಾಟೆಜಿಗೆ ವಿಜಯೇಂದ್ರ ಪ್ಲಾನ್ ಮಾಡುತ್ತಿದ್ದಾರೆ. ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಆಳ-ಅಗಲಗಳ ಕಂಪ್ಲೀಟ್ ಸ್ಟಡಿ ಮಾಡುತ್ತಿದ್ದಾರೆ. ಈ ಮೂಲಕ ಶತಾಯಗತಾಯ ಉತ್ತರದಲ್ಲೂ ವಿಜಯ ಪತಾಕೆ ಹಾರಿಸಲು ವಿಜಯೇಂದ್ರ ಯೋಜನೆ ಹಾಕಿದ್ದಾರೆ.
ವಿಜಯೇಂದ್ರ ಸ್ಟ್ರಾಟೆಜಿಗಳೇನು?
ಈಗಿನಿಂದಲೇ ಪಕ್ಷ ಸಂಘಟನೆ, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವುದು. ಬೂತ್ ಮಟ್ಟದಿಂದ ಆರಂಭದಿಂದಲೇ ಚುನಾವಣೆಗೆ ಸಿದ್ಧತೆ ನಡೆಸುವುದು. ಬೂತ್ ಮಟ್ಟದಲ್ಲಿ ಮತದಾರರನ್ನು ಕಾರ್ಯಕರ್ತರ ಮೂಲಕ ತಲುಪಿ ಸರ್ಕಾರದ ಸಾಧನೆಗಳ ಮನವರಿಕೆ ಮಾಡುವುದು. ಚುನಾವಣೆಯಲ್ಲಿ ಪ್ರಭಾವ ಬೀರುವ ಸಮುದಾಯಗಳ ಮೇಲೆ ವಿಶೇಷ ಗಮನ ಹರಿಸುವುದು.
ದೊಡ್ಡ ಮತ್ತು ಪ್ರಭಾವಿ ಸಮುದಾಯಯಗಳ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡುವುದು. ಕ್ಷೇತ್ರದ ಪ್ರಬಲ ಸಮುದಾಯಗಳ ಮುಖಂಡರಿಗೆ ಸರ್ಕಾರ ಸಾಧನೆ, ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ಮನವರಿಕೆ ಮಾಡುವುದು. ನೀತಿ ಸಂಹಿತೆ ಜಾರಿಗೂ ಮುನ್ನ ಕೆಲ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮುಂದುವರಿಕೆ ಮಾಡುವುದು. ಮಹಿಳಾ ಮತದಾರರನ್ನು ತಲುಪಲು ಸಹ ಸ್ಟ್ರಾಟೆಜಿ ರೆಡಿ ಮಾಡುತ್ತಿದ್ದು, ಮಹಿಳಾ ಸ್ವಸಹಾಯ ಸಂಘಗಗಳು, ಗ್ರಾಮೀಣ ಮಹಿಳೆಯರ ಸಮಸ್ಯೆಗಳ ಈಡೇರಿಕೆಗೆ ಆದ್ಯತೆ ನೀಡಿವುದಾಗಿದೆ.