ಕೊಪ್ಪಳ: ಪ್ರಿಯತಮೆಯ ಶೀಲ ಶಂಕಿಸಿ ಪ್ರಿಯತಮ ತನ್ನ ಸಹೋದರನ ಸಹಾಯದಿಂದ ಕೊಲೆ ಮಾಡಿ ಶವ ಹೂತು ಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೆಗುಡ್ಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮದ್ದಾನವ್ವ (19) ಕೊಲೆಯಾದ ಯುವತಿ. ಯಲ್ಲಪ್ಪ ಬಮ್ಮನಗೌಡ (22) ಎಂಬಾತನೇ ಕೊಲೆ ಮಾಡಿರುವ ಪ್ರಿಯಕರ. ಯಲ್ಲಪ್ಪ ತನ್ನ ಸಹೋದರ ರಮೇಶ್ (19) ಸಹಾಯದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಟಿಕ್ಟಾಕ್, ಫೇಸ್ಬುಕ್ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ
ಕಳೆದ ಒಂದು ವರ್ಷದಿಂದ ಯಲ್ಲಪ್ಪ ಮತ್ತು ಮದ್ದಾನವ್ವ ಇಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗಲು ತಿರ್ಮಾನಿಸಿದ್ದರು. ಯುವತಿ ಅಪ್ರಾಪ್ತಳಾಗಿದ್ದರಿಂದ ಎರಡೂ ಕುಟುಂಬದವರು ಮುಂದಿನ ವರ್ಷ ಮದುವೆಯಾಗುವಂತೆ ಬುದ್ಧಿವಾದ ಹೇಳಿದ್ದರಿಂದ ಯುವಕನ ಮನೆಯಲ್ಲಿ ಯುವತಿಯನ್ನು ಬಿಟ್ಟಿದ್ದರು.
ಇತ್ತ ಯುವಕ, ಯುವತಿಯ ಮೇಲೆ ಅನುಮಾನ ಪಟ್ಟು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಯುವತಿ ಶವವನ್ನು ಮುರುಡಿ ಗ್ರಾಮದ ಕೆರೆ ಹತ್ತಿರದ ಜಮೀನಲ್ಲಿ ಹೂತು ಹಾಕಿದ್ದಾನೆ. ಪೊಲೀಸರು ನಿನ್ನೆ ಶವವನ್ನು ಹೊರತೆಗೆದು ಆರೋಪಿ ಯಲ್ಲಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ರಮೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.