-ಜಿಲ್ಲೆಗೆ ನಾಲ್ವರು ಮಂತ್ರಿಗಳಿದ್ರೂ ಪ್ರಯೋಜನವಿಲ್ಲ
-ಶಿವಾಜಿ ಪುತ್ಥಳಿ ತೆರವು ಮಾಡಿಲ್ಲ
ಬೆಳಗಾವಿ: ಕಳೆದ ವರ್ಷ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದರೂ ರಾಜ್ಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಬರಲಿಲ್ಲ. ಸ್ವತಃ ಸಿಎಂ ಯಡಿಯೂರಪ್ಪನವರೇ ಪರಿಹಾರಕ್ಕೆ ಒತ್ತಾಯಿಸಿದ್ರೂ ಪ್ರಧಾನಿಗಳು ಕ್ಯಾರೆ ಎನ್ನಲಿಲ್ಲ. ಸಾಕಷ್ಟು ಸಂಸದರು ಕರ್ನಾಟಕದಿಂದ ಆಯ್ಕೆ ಆದ್ರೂ ಮೋದಿ ಅವರಿಗೆ ಕರ್ನಾಟಕದ ಮೇಲೆ ಪ್ರೀತಿ ಕಡಿಮೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೇಂದ್ರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರವಾಹಕ್ಕೆ ಕಡಿಮೆ ತತ್ತರಿಸಿದ ರಾಜ್ಯಕ್ಕೆ ಹೆಚ್ಚು ಪರಿಹಾರ ನೀಡಲಾಗ್ತಿದೆ. ಮೋದಿ ಸರ್ಕಾರ ಕರ್ನಾಟಕವನ್ನು ಪದೇ ಪದೇ ನಿರ್ಲಕ್ಷಿಸುತ್ತಿದೆ. ನಮ್ಮ ಸಂಸದರು ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ವರು ಮಂತ್ರಿಗಳಿದ್ರೂ ಪ್ರಯೋಜನವಿಲ್ಲ: ಜಿಲ್ಲೆಗೆ ನಾಲ್ವರು ಮಂತ್ರಿಗಳಿದ್ದರೂ ಪ್ರಯೋಜನವಾಗ್ತಿಲ್ಲ. ನಾಲ್ವರು ಮಂತ್ರಿ ಆಗಿದಕ್ಕೆ ಜಿಲ್ಲೆಗೆ ಸಿಂಹಪಾಲು ಸಿಕ್ತು ಎಂದು ಹೇಳಲಾಗಿತ್ತು. ಆದ್ರೆ ನಾಲ್ವರು ಜಿಲ್ಲೆಯ ಸಮಸ್ಯೆ ಪರಿಹರಿಸಲು ಶ್ರಮಿಸುತ್ತಿಲ್ಲ. ಕೋವಿಡ್, ಪ್ರವಾಹ ಭೀತಿ ಸಂಬಂಧ ಜಂಟಿ ಆಗಿ ಸಭೆ ನಡೆಸಿದ್ರೆ ಮಾತ್ರ ಅಧಿಕಾರಿಗಳ ಮೇಲೆ ಒತ್ತಡ ತರಬಹುದು. ಆದ್ರೆ ಜಿಲ್ಲೆಯ ಸಚಿವರ ಮಧ್ಯೆ ಸಮನ್ವಯತೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಪುತ್ಥಳಿ ತೆರವು ಮಾಡಿಲ್ಲ: ಮಣಗುತ್ತಿಯ ಶಿವಾಜಿ ಮೂರ್ತಿ ವಿವಾದ ಸ್ಥಳೀಯ ಸಮಸ್ಯೆ. ಆದ್ರೆ ಮಹಾರಾಷ್ಟ್ರ ಮಾಧ್ಯಮಗಳೇ ಈ ಸಂಬಂಧ ಹೆಚ್ಚು ಪ್ರಚೋದಕ ಸುದ್ದಿ ಬಿತ್ತರಿಸುತ್ತಿವೆ. ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಗೆ ಯಾರ ವಿರೋಧವಿಲ್ಲ. ಸರ್ಕಾರಿ ಜಾಗದಲ್ಲಿ ಪುತ್ಥಳಿ ನಿರ್ಮಿಸಲಾಗುತ್ತಿದಕ್ಕೆ ವಿರೋಧವಿದೆ. ನಾವೇನು ಪುತ್ಥಳಿ ತೆರವು ಮಾಡಿಲ್ಲ, ಪ್ರತಿಷ್ಠಾಪನೆ ಮಾಡಿದವ್ರೆ ತೆಗೆದುಕೊಂಡು ಹೋಗಿದ್ದಾರೆ. ಇದು ಸ್ಥಳೀಯ ಸಮಸ್ಯೆ, ಸ್ಥಳೀಯರೇ ಬಗೆಹರಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಶಿವಸೇನೆ, ಎಂಇಎಸ್ ಮೊದಲಿನಿಂದಲೂ ಭಾಷಾ ರಾಜಕಾರಣ ಮಾಡಿಕೊಂಡು ಬಂದಿವೆ. ಕರಾಳ ದಿನ ಆಚರಿಸುವ ಮೂಲಕ ಭಾಷಾ ಸೌಹಾರ್ದತೆಗೆ ಧಕ್ಕೆ ತರುತ್ತಾರೆ. ಮಹಾರಾಷ್ಟ್ರದ ಬಿಜೆಪಿ ಶಾಸಕನಿಗೆ ಇಲ್ಲಿಯ ಸಮಸ್ಯೆ ಗೊತ್ತಿಲ್ಲ. ಸುಖಾಸುಮ್ಮನೆ ಆರೋಪ ಮಾಡಿ, ರಾಜಕಾರಣ ಮಾಡಿದ್ದಾರೆ. ಲ್ಲಿನ ಸಮಸ್ಯೆ ಪರಿಹರಿಸಲು ದೆಹಲಿ, ಮುಂಬೈಯಿಂದ ಯಾರೂ ಬರಬೇಕಿಲ್ಲ. ಛತ್ರಪತಿ ಶಿವಾಜಿ ಬಗ್ಗೆ ನಮಗೂ ಅಪಾರ ಗೌರವವಿದೆ. ನಾವೂ ಕೂಡ ಸರ್ಕಾರದ ವತಿಯಿಂದ ಶಿವಾಜಿ ಜಯಂತಿ ಮಾಡ್ತಿದ್ದೇವೆ ಎಂದು ಟೀಕಾಕಾರರಿಗೆ ಉತ್ತರ ನೀಡಿದರು.