– ಗುಂಡು, ಶೆಲ್ದಾಳಿ ನಡೆಸಿದ ಪಾಕ್
ಶ್ರೀನಗರ: ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಪಾಕಿಸ್ತಾನದ ಐವರು ಯೋಧರು ಸಾವನ್ನಪ್ಪಿದ್ದಾರೆ. ಅಲ್ಲದೆ ಮೂವರು ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯುದ್ದಕ್ಕೂ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಸಹ ಗುಂಡು ಹಾರಿಸಿದ್ದಾರೆ. ಈ ವೇಳೆ ಐವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಪೂಂಚ್ ಜಿಲ್ಲೆಯ ಎಲ್ಒಸಿಯ ಮಂಕೋಟೆ ಸೆಕ್ಟರ್ ನಲ್ಲಿ ಸಾರ್ವಜನಿಕ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿದೆ. ಪಾಕ್ ಸೇನೆಯ ದಾಳಿಗೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗಳು ಹಾನಿಗೀಡಾಗಿವೆ. ಹೀಗಾಗಿ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. ಈ ವೇಳೆ ಪಾಕ್ನ ಐವರು ಸೈನಿಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮಾತ್ರವಲ್ಲದೆ ಪಾಕ್ನ ಹಲವು ಬಂಕರ್ ಗಳು ಸಹ ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.
ಸುಮಾರು 2 ಗಂಟೆಗಳ ಎರಡೂ ಕಡೆಯವರಿಂದ ಗುಂಡಿನ ಚಕಮಕಿ ನಡೆದಿದೆ. 1999ರಲ್ಲಿ ಉಭಯ ದೇಶಗಳು ಸಹಿ ಹಾಕಿದ್ದ ದ್ವಿಪಕ್ಷೀಯ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ನಿರ್ಭಯದಿಂದ ಈ ವರ್ಷದ ಆರಂಭದಿಂದ ಹಲವು ಬಾರಿ ಉಲ್ಲಂಘಿಸಿದೆ.
ಜನವರಿ 2020ರಿಂದ ಈ ವರೆಗೆ ಜಮ್ಮು ಕಾಶ್ಮೀರದ ಎಲ್ಒಸಿಯಲ್ಲಿ 3,200 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಇದರಿಂದ 100 ಜನರಿಗೆ ಗಾಯಗಳಾಗಿವೆ. 30 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ ಶೆಲ್ಲಿಂಗ್ ದಾಳಿಯಿಂದಾಗಿ ಎಲ್ಒಸಿ ಬಳಿಯ ಜನ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತಾಗಿದೆ.