ಬೆಂಗಳೂರು: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಮಕ್ಕಳ ಪೋಷಣೆಯಲ್ಲೇ ಕಾಲ ಕಳೆಯುತ್ತಿರುವ ನಟಿ, ಬಿಡುವಿದ್ದಾಗ ಸೆಲ್ಫಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಇದೀಗ ಸೆಲ್ಫಿ ಫೋಟೋ ಮೂಲಕವೇ ರಾಕಿ ಭಾಯ್ಗೆ ಟಾಂಗ್ ನೀಡಿದ್ದಾರೆ. ಇದಕ್ಕೆ ರಾಮಾಚಾರಿ ನಾಜೂಕಾಗಿಯೇ ಉತ್ತರ ನೀಡಿದ್ದಾರೆ.
ಹೌದು. ಇಂದು ಬೆಳಗ್ಗೆ ಸೆಲ್ಫಿ ಫೋಟೋವೊಂದನ್ನು ಪೋಸ್ಟ್ ಮಾಡಿ ರಾಧಿಕಾ ಪಂಡಿತ್, ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದರು. ಎಲ್ಲ ಪ್ರಯತ್ನಗಳ ಬಳಿಕ ಈ ಸೆಲ್ಫಿ ಶಾಟ್ ಬಂದಿದೆ. ಹಿಂದೆ ಬಾತುಕೋಳಿಗಳೂ ಕಾಣುವಂತೆ ಸೆರೆಹಿಡಿಯಲು ಯತ್ನಿಸಿದೆ ಆದರೆ ಇದರಲ್ಲಿ ಸಫಲವಾಗಿಲ್ಲ. ಹೀಗಾಗಿ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ ಎಂಬಂತೆ ಕೆಳಗೆ ಮತ್ತೊಂದು ಸಾಲುಗಳನ್ನು ಬೆರೆಯುವ ಮೂಲಕ ರಾಕಿ ಭಾಯ್ಗೆ ಟಾಂಗ್ ನೀಡಿದ್ದು, ಹೀಗಾಗಿಯೇ ನಮ್ಮ ಜೊತೆಗೆ ಪರ್ಸನಲ್ ಫೋಟೋಗ್ರಾಫರ್ ಅವಶ್ಯಕತೆ ಇದೆ ಎಂದಿದ್ದಾರೆ. ಅಲ್ಲದೆ ಕೊನೆಗೆ ಬ್ರಾಕೆಟ್ನಲ್ಲಿ ಪತಿ ಎಂದು ಭಾವಿಸಿ ಓದಿ ಎಂದು ಹೇಳಿದ್ದಾರೆ. ಈ ಮೂಲಕ ರಾಮಾಚಾರಿ ಫೋಟೋ ತೆಗೆಯಬೇಕೆಂದು ನಯವಾಗಿ ಕೇಳಿಕೊಂಡಿದ್ದಾರೆ.
ಇದಕ್ಕೆ ಯಶ್ ಪ್ರತಿಕ್ರಿಯಿಸಿದ್ದು, ಒತ್ತಾಯಪೂರ್ವಕವಾಗಿ ಎಲ್ಲ ಗಂಡಂದಿರೂ ಫೋಟೋಗ್ರಾಫರ್ಗಳೇ. ಎಲ್ಲ ಪತಿಯಂದಿರು ಹಾಗೂ ಬಾಯ್ಫ್ರೆಂಡ್ಗಳು ಇದನ್ನು ಒಪ್ಪುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಚಮಕ್ ನೀಡಿದ್ದಾರೆ. ಈ ಕಮೆಂಟ್ಗೆ ಹಲವರು ಪ್ರತಿಕ್ರಿಯಿಸುತ್ತಿದ್ದು, ರಾಧಿಕಾ ಅವರ ಫೋಟೋ ತೆಗೆಯುವಂತೆ ರಾಕಿ ಭಾಯ್ಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿಗಾಗಿ ಪರದಾಡಿದ ರಾಧಿಕಾ- ಬೇಸರಗೊಂಡು ವಿಡಿಯೋ ಮಾಡಿದ ಯಶ್, ಐರಾ
ಲಾಕ್ಡೌನ್ ಬಳಿಕ ಇತ್ತೀಚೆಗಷ್ಟೇ ಕೆಜಿಎಫ್-2 ಚಿತ್ರೀಕರಣವನ್ನು ಮತ್ತೆ ಶುರು ಮಾಡಲಾಗಿದೆ. ಈ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಅಪ್ಡೇಟ್ ನೀಡಿದ್ದರು. ಆದರೆ ಯಶ್ ಅವರ ಚಿತ್ರೀಕರಣದ ಕುರಿತು ಯಾವುದೇ ಅಪ್ಡೇಟ್ ಸಿಕ್ಕಿಲ್ಲ.
ರಾಧಿಕಾ ಪಂಡಿತ್ ಮಕ್ಕಳನ್ನು ನೋಡಿಕೊಳ್ಳುತ್ತಿದ್ದು, ಬಿಡುವಿದ್ದಾಗಲೆಲ್ಲ ಸೆಲ್ಫಿ ಕ್ಲಿಕ್ಕಿಸುತ್ತಿರುತ್ತಾರೆ. ಸಿನಿಮಾದಲ್ಲಿ ಸಹ ನಟಿಸುತ್ತಿದ್ದು, ಲಾಕ್ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ. ಹೀಗಾಗಿ ಲಾಕ್ಡೌನ್ ಸಮಯವನ್ನು ಯಶ್, ರಾಧಿಕಾ ದಂಪತಿ ಮಕ್ಕಳು ಹಾಗೂ ಕುಟುಂಬದೊಂದಿಗೆ ಕಳೆದಿದ್ದಾರೆ. ಅಲ್ಲದೆ ಇದೇ ವೇಳೆ ಜೂನಿಯರ್ ರಾಕಿ ಭಾಯ್ಗೆ ನಾಮಕರಣ ಕಾರ್ಯಕ್ರಮವನ್ನು ಸಹ ಮಾಡಿದ್ದು, ಯಥರ್ವ ಎಂದು ಹೆಸರಿಡಲಾಗಿದೆ. ಅಂದಹಾಗೆ ರಾಧಿಕಾ ಪಂಡಿತ್ ಪ್ರಸ್ತುತ ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.