– ಮನೆ ಬದಲಿಸಿದರೂ ಬಾಲಕನ ಮನಸ್ಸು ಬದಲಾಗಲಿಲ್ಲ
ಚೆನ್ನೈ: ಪಬ್ಜಿ ಗೇಮ್ ನಿಷೇಧದಿಂದ ಬೇಸತ್ತು 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಈರೋಡ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪುಂಜೈಪುಲಿಯಂಪಟ್ಟಿಯ ಕಲ್ಲಿಪಾಳಯಂನ ನಿವಾಸದಲ್ಲಿ ಯಾರೂ ಇಲ್ಲದ ವೇಳೆ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕನನ್ನು 14 ವರ್ಷದ ಕೆ.ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಕೊಯಂಬತ್ತೂರು ಮೂಲದವನಾಗಿದ್ದು, ಪಬ್ಜಿ ಗೇಮ್ಗೆ ದಾಸನಾಗಿದ್ದ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್ ಆಧರಿತ ಗೇಮ್ನನ್ನು ನಿಷೇಧಿಸಿದೆ.
ಅರುಣ್ ತಂದೆ ಕಂಡವೇಲ್ ಈ ಕುರಿತು ಮಾಹಿತಿ ನೀಡಿದ್ದು, ಅರುಣ್ ತನ್ನ ಮೊಬೈಲ್ನಲ್ಲಿ ಪಬ್ಜಿ ಆಡುತ್ತಿದ್ದ. ಆ್ಯಪ್ ನಿಷೇಧವಾದ ಬಳಿಕ ಆತ ತುಂಬಾ ಬೇಸರಗೊಂಡಿದ್ದ. ಅಲ್ಲದೆ ಬ್ಯಾನ್ನಿಂದ ಆಘಾತಕ್ಕೊಳಗಾಗಿ ಸೂಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲ ದಿನ ಹೊಸ ಪ್ರದೇಶಕ್ಕೆ ತೆರಳಿ ಬಾಲಕ ಸರಿಯಾಗಬಹುದು ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಅರುಣ್ ಹಾಗೂ ಆತನ ತಾಯಿ ರಾಮಪ್ರಭಾ ಕಲ್ಲಿಪಾಳಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಸೋಮವಾರ ಸಂಜೆ ರಾಮಪ್ರಭಾ ದಿನಸಿ ತರಲು ಪುಂಜೈಪುಲಿಯಂಪಟ್ಟಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಅರುಣ್ ಒಬ್ಬನೆ ಇದ್ದ. ರಾತ್ರಿ 9ರ ವೇಳೆ ರಾಮಪ್ರಭಾ ಮನೆಗೆ ಮರಳಿದ್ದು, ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಅಕ್ಕ ಪಕ್ಕದವರು ಬಾಲಕನ ಶವವನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.
ಪಬ್ಜಿ ಆಟವನ್ನು ದಕ್ಷಿಣ ಕೊರಿಯಾದ ಕಂಪನಿ ಅಭಿವೃದ್ಧಿ ಪಡಿಸಿದ್ದರೂ ಇದರ ಮೊಬೈಲ್ ಆವೃತ್ತಿಯನ್ನು ಚೀನಾ ಮೂಲದ ಟೆನ್ಸೆಂಟ್ ಹೋಲ್ಡಿಂಗ್ಸ್ ಕಂಪನಿ ಖರೀದಿಸಿತ್ತು. ಪಬ್ಜಿ ಆಟದ ದೊಡ್ಡ ಮಾರುಕಟ್ಟೆಯಾಗಿದ್ದ ಭಾರತದಲ್ಲಿ 17.5 ಕೋಟಿ ಜನ ಬಳಕೆ ಮಾಡುತ್ತಿದ್ದರು. ಲಡಾಖ್ ಗಡಿಯಲ್ಲಿ ಚೀನಾ ಕಿರಿಕ್ ಮಾಡಿದ ಬೆನ್ನಲ್ಲೇ ದೇಶದ ಭದ್ರತೆ ಮತ್ತು ಜನರ ಖಾಸಗಿತನವನ್ನು ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರ 117 ಚೀನಿ ಅಪ್ಲಿಕೇಶನ್ಗಳನ್ನು ನಿಷೇಧ ಮಾಡಿತ್ತು.
ಮಕ್ಕಳ ಮೆದುಳಿನ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯುವ ಜನತೆ ಹಾಳಾಗುತ್ತಿದ್ದಾರೆ ಹೀಗಾಗಿ ಪಬ್ಜಿ ನಿಷೇಧಿಸಬೇಕೆಂದು ಜನ ಆಗ್ರಹಿಸಿದ್ದರು. ಗಲ್ವಾನ್ ಘರ್ಷಣೆಯ ಬಳಿಕ ಟಿಕ್ಟಾಕ್ ಸೇರಿದಂತೆ 59 ಅಪ್ಲಿಕೇಶನ್ಗಳನ್ನು ಭಾರತ ನಿಷೇಧಿಸಿತ್ತು. ಇದಾದ ಬಳಿಕ ಮತ್ತೆ 47 ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು