– ಕೊರೊನಾ ಭಯದಿಂದ ಕೊಲೆ ಮಾಡಿ, ಸೂಸೈಡ್
ಧಾರವಾಡ: ಪತ್ನಿ ಮತ್ತು ಮಗಳಿಗೆ ವಿಷ ಕೊಟ್ಟ ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಕವಳಿಕಾಯಿ ಚಾಳದಲ್ಲಿ ನಡೆದಿದೆ.
ಅರ್ಪಿತಾ (28) ಹಾಗೂ ನಾಲ್ಕು ವರ್ಷದ ಶುಕೃತಾ ಕೊಲೆಯಾದ ತಾಯಿ-ಮಗಳು. ಮೌನೇಶ್ ಪತ್ತಾರ (36) ಆತ್ಮಹತ್ಯೆ ಮಾಡಿಕೊಂಡ ಖಾಸಗಿ ಕಂಪನಿಯ ಉದ್ಯೋಗಿ. ಮೊದಲಿಗೆ ಹೆಂಡತಿ ಹಾಗೂ ಮಗಳಿಗೆ ವಿಷ ಕೊಟ್ಟಿದ್ದಾನೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಮೌನೇಶ್ ಪತ್ತಾರ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವನಾಗಿದ್ದು, ಧಾರವಾಡದಲ್ಲಿ ಉದ್ಯೋಗಕ್ಕಾಗಿ ಬಂದು ನೆಲೆಸಿದ್ದ. ಇಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದನು. ಈ ದಂಪತಿ ಮದುವೆಯಾಗಿ ಐದು ವರ್ಷಗಳಾಗಿತ್ತು. ಆದರೆ ಇತ್ತೀಚಿಗೆ ಕಂಪನಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಉದ್ಯೋಗ ಹಾಗೂ ಸಂಬಳ ಕಡಿತವಾಗುವ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಮನೆಯಲ್ಲಿ ಪತ್ನಿಗೆ ಬಿಪಿ ಲೋ ಆಗಿದೆ ಅಲ್ಲದೇ ಮಗಳಿಗೆ ಕೂಡ ಜ್ವರ ಕಾಣಿಡಿಕೊಂಡಿದೆ. ಇದನ್ನ ಕಂಡ ಮೌನೇಶ್ ಸ್ಥಳೀಯ ವೈದ್ಯರೊಬ್ಬರ ಬಳಿ ತೋರಿಸಿದ್ದನು. ವೈದ್ಯರಿಗೆ ತೋರಿಸಿದ್ದರು ಮಗಳ ಜ್ವರ ಕಡಿಮೆಯಾಗದಿದ್ದಾಗ ಕೊರೊನಾ ಲಕ್ಷಣ ಎಂದು ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪತ್ನಿ, ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರು ಪಂಚನಾಮೆ ಮಾಡಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಧಾರವಾಡ ಉಪನಗರ ಪೊಲೀಸ್ ಠಾಣೆ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.