ಉಡುಪಿ: ವಿದ್ಯಾಗಮ ಸತತ ವರದಿ ಮಾಡಿದ್ದ ಪಬ್ಲಿಕ್ ಟಿವಿಗೆ ಗೆಲುವಾಗಿದ್ದು, ರಾಜ್ಯ ಸರ್ಕಾರ ಯೋಜನೆಯನ್ನು ತಾತ್ಕಾಲಿಕ ಸ್ಥಗಿತ ಮಾಡಿದೆ. ಇದು ಪಬ್ಲಿಕ್ ಟಿವಿ ಅಭಿಯಾನದ ಗೆಲುವು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿನಂದನೆ ಸಲ್ಲಿಸಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಇದು ಪಬ್ಲಿಕ್ ಟಿವಿ ಸಂಪಾದಕರ ದನಿಗೆ ಗೆಲುವು ಎಂದರು.
ವಿದ್ಯಾಗಮ ಯಾವುದೇ ಕಾರಣಕ್ಕೂ ಮುಂದುವರಿಯಬಾರದು. ಯೋಜನೆ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಮಾರಕ. ಈ ವರ್ಷ ಶಾಲೆ ಬೇಡವೇ ಬೇಡ. ಎಸ್ಎಸ್ಎಕ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶಿಕ್ಷಣ ಬಹಳ ಮುಖ್ಯ. ಅವರಿಗೆ ಬೇರೆಯದೇ ಆದ ವಿಶೇಷವಾದ ಯೋಜನೆಯನ್ನು ಮಾಡಿ ಎಂದು ರಾಜ್ಯ ಸರಕಾರಕ್ಕೆ ಸಲಹೆ ಕೊಟ್ಟರು.
ಉಳಿದ ಎಲ್ಲಾ ತರಗತಿಯ ಮಕ್ಕಳನ್ನು ಆನ್ಲೈನ್ ಶಿಕ್ಷಣದ ಮೂಲಕ ಕಡಿಮೆ ಪಾಠ ಮಾಡಿ ಪಾಸ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕರೆಯನ್ನು ಕೊಟ್ಟಿದ್ದಾರೆ. ಮೊದಲು ಜೀವ ಉಳಿಸಬೇಕು. ಆನಂತರ ಜೀವನವನ್ನು ರೂಪಿಸಬೇಕು. ರಾಜ್ಯ ಸರ್ಕಾರ ಇದನ್ನು ಪಾಲಿಸಬೇಕು ಎಂದು ಸಲಹೆ ಕೊಟ್ಟರು. 2020ರಲ್ಲಿ ಜೀವ ಉಳಿಸಿಕೊಳ್ಳಬೇಕು. 2021ರಲ್ಲಿ ಜೀವನವನ್ನು ಆರಂಭಿಸೋಣ ಎಂದರು.
ಕೆಲವು ಜಿಲ್ಲೆಗಳು ನಮಗೆ ಶಿಕ್ಷಣ ಮುಖ್ಯ ಎಂದು ಹೇಳುತ್ತವೆ. ಅಂತಹವರಿಗೆ ಆನ್ಲೈನ್ ಶಿಕ್ಷಣದ ಮೂಲಕ ಪಾಠ ಮಾಡಬಹುದು. ಮನೆಗಳಲ್ಲಿ ಪೋಷಕರು ಕೂಡ ಮಕ್ಕಳಿಗೆ ಪಾಠ ಮಾಡಬೇಕು. ಈಗಿನ ಕಾಲದಲ್ಲಿ ಮನೆಯಲ್ಲಿ ಒಂದು ಎರಡು ಮಕ್ಕಳಿರುತ್ತಾರೆ. ಅವರಿಗೂ ಕೂಡ ಸೋಂಕು ಆವರಿಸಿದರೆ ಬಹಳಷ್ಟು ಕಷ್ಟ ಆಗುತ್ತದೆ.
ಶಾಲೆ ಆರಂಭ ಮಾಡಿ ಎಂಬ ಒತ್ತಡದ ಮೇಲೆ ಒತ್ತಡ ಬಂದದ್ದಕ್ಕೆ ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ಯೋಜನೆ ಮಾಡಿತ್ತು. ರಾಜ್ಯ ಸರ್ಕಾರಕ್ಕೆ ಈಗ ಅನುಭವಕ್ಕೆ ಬಂದಿದೆ, ಶಾಲೆಗಳು ಬೇಡ ಅಂತ ಹೇಳಿ ಆದೇಶ ಮಾಡಿದೆ ಶಾಲೆ ಬೇಡ ಅನ್ನುವ ಮಾಧ್ಯಮಗಳ ಅಭಿಯಾನಕ್ಕೆ ನಾನು ಕೈ ಜೋಡಿಸಿದ್ದೇನೆ. ಡಿಸೆಂಬರ್ ತನಕ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವುದು ಬೇಡ. ಜನವರಿ ತಿಂಗಳಲ್ಲಿ ಮತ್ತೆ ಪ್ರತಿ ಜಿಲ್ಲೆಯಿಂದ ವರದಿಗಳನ್ನು ತರಿಸಿಕೊಳ್ಳಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಕೊರೊನಾದ ವ್ಯಾಪಕತೆ ಕಡಿಮೆಯಾದರೆ, ಲಸಿಕೆ ಬಂದರೆ ಮತ್ತೆ ವಿದ್ಯಾಗಮ ಶಾಲೆ ಆರಂಭಿಸಿ. ಶಾಲೆ ಬೇಡ ಅನ್ನುವುದಕ್ಕೆ ಒಂದು ನಿರ್ದಿಷ್ಟವಾದ ಕಾರಣ ಇದೆ. ಹಾಗಾಗಿ ನಾವು ಬೇಡ ಅನ್ನುತ್ತಿದ್ದೇನೆ. ಪಠ್ಯಕ್ರಮವನ್ನು ಕಡಿಮೆ ಮಾಡಿ ಮಕ್ಕಳನ್ನು ಪಾಸ್ ಮಾಡಿ. ಅವರ ಒಂದು ವರ್ಷವನ್ನು ಲಾಸ್ ಮಾಡಬೇಡಿ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಈ ಎರಡು ತರಗತಿಗಳ ವಿದ್ಯಾರ್ಥಿಗಳ ಪರವಾಗಿ ರಾಜ್ಯ ಸರ್ಕಾರ ಶಿಕ್ಷಣ ತಜ್ಞರು ಏನಾದರೂ ವಿಶೇಷವಾದ ಯೋಜನೆಯನ್ನು ಜಾರಿಗೆ ತರಬೇಕು. ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ದೊಡ್ಡ ಮಕ್ಕಳು ಸುಲಭವಾಗಿ ಪಾಲಿಸಬಹುದು ಎಂದು ಅಭಿಪ್ರಾಯಪಟ್ಟರು.