ಮಂಡ್ಯ: ಅರಣ್ಯ ಇಲಾಖೆ ಈಗ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದು, ಹೆಜ್ಜಾರ್ಲೆ ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಗೂ ಜಿಪಿಎಸ್ ಅಳವಡಿಸುವ ಮೂಲಕ ಅವುಗಳ ಸಂಚಾರ ಕ್ರಮ ಅಧ್ಯಯನಕ್ಕೆ ನಿರ್ಧರಿಸಿದೆ.
ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಪ್ರಸಿದ್ಧ ಪಕ್ಷಿಧಾಮ. ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಹೆಚ್ಚಾಗಿ ಬರುವ ಹೆಜ್ಜಾರ್ಲೆ(ಪೆಲಿಕಾನ್) ಮತ್ತು ಬಣ್ಣದಕೊಕ್ಕರೆ(ಪೆಂಡೆಂಟ್ ಸ್ಟ್ರೋಕ್)ಗಳು ಕೊಕ್ಕರೆ ಬೆಳ್ಳೂರಿನಲ್ಲಿ ಸಂತಾನಾಭಿವೃದ್ಧಿ ಮುಗಿಸಿ ಬೇರೆಡೆ ಹೋಗುತ್ತವೆ. ಈಗ ಇಂತಹ ಹೆಜ್ಜಾರ್ಲೆಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಅವು ಸಂಚಾರ ಕ್ರಮ ತಿಳಿಯಲು ಅರಣ್ಯ ಇಲಾಖೆ ಮುಂದಾಗಿದ್ದು, ಪ್ರಾಯೋಗಿಕವಾಗಿ 10-12 ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಕಲಾಗಿದೆ.
ಪಕ್ಷಿಗಳ ಸಂತಾನಾಭಿವೃದ್ಧಿ ವೇಳೆ ಮರದಿಂದ ಕೆಳಗೆ ಬೀಳುವ ಮರಿಗಳನ್ನ ರಕ್ಷಿಸಿ ಪೋಷಿಸುವ ಅರಣ್ಯ ಇಲಾಖೆ 3-4 ತಿಂಗಳ ಆರೈಕೆ ಬಳಿಕ ಅವುಗಳನ್ನು ಹಾರಲು ಬಿಡುತ್ತವೆ. ಈ ವೇಳೆ ಪಕ್ಷಿಗಳ ಕಾಲು-ರೆಕ್ಕೆಗಳಿಗೆ ಪೆಟಾಜಿಯಲ್ ನಂಬರ್ ಗಳನ್ನು ಹಾಕಲಾಗಿದೆ. ಇದನ್ನೂ ಓದಿ: ಆ.15ರ ನಂತರ ಲಾಕ್ ಆಗುತ್ತಾ ಬೆಂಗಳೂರು? – ಟಫ್ ರೂಲ್ಸ್ ಬಗ್ಗೆ ಅಶೋಕ್ ಸುಳಿವು
ಕಳೆದ ಮಾರ್ಚ್ನಲ್ಲಿ 4 ಹೆಜ್ಜಾರ್ಲೆ ಮರಿಗಳಿಗೆ ಕೆ-01, ಕೆ-02, ಕೆ-03, ಕೆ-04 ಎಂಬ ನಂಬರ್ ಹಾಕಿ ಬಿಡಲಾಗಿದೆ. ಹಾಗೆಯೇ ಏಪ್ರಿಲ್ನಲ್ಲಿ 9 ಬಣ್ಣದ ಕೊಕ್ಕರೆಗಳಿಗೆ ಎಪಿಯು/ಕೆ-5551, ಎಪಿಎಸ್/ಕೆ-5552, ಎವೈನ್/ಕೆ-5554 ಎಂದು ನಂಬರ್ ಟ್ಯಾಗ್ ಹಾಕಿ ಬಿಡುಗಡೆಗೊಳಿಸಲಾಗಿದೆ. ಈ ನಂಬರ್ ಟ್ಯಾಗ್ಗಳಿಂದ ಸಂತಾನೋತ್ಪತ್ತಿ ಬಳಿಕ ತೆರಳಿದ ಪಕ್ಷಿಗಳು ಮತ್ತೆ ಕೊಕ್ಕರೆ ಬೆಳ್ಳೂರಿಗೆ ಬರುತ್ತವಾ ಅಥವಾ ಬೇರೆ ಯಾವುದಾದರೂ ಸ್ಥಳಗಳಿಗೆ ತೆರಳುತ್ತವಾ ಎಂಬುದನ್ನು ಟ್ಯಾಗ್ ಗಮನಿಸಿದವರಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಕೊಕ್ಕರೆ ಬೆಳ್ಳೂರಿಗೆ ಎಲ್ಲಿಂದ ಪಕ್ಷಿಗಳು ಬರುತ್ತವೆ? ಸಂತಾನೋತ್ಪತ್ತಿ ಬಳಿಕ ಆ ಪಕ್ಷಿಗಳು ಎಲ್ಲಿಗೆ ತೆರಳುತ್ತವೆ ಎಂಬುದನ್ನ ಅಧ್ಯಯನ ಮಾಡಲು ಹೆಜ್ಜಾರ್ಲೆ ಹಾಗೂ ಬಣ್ಣದ ಕೊಕ್ಕರೆಗಳಿಗೆ ಜಿಪಿಎಸ್ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. 4 ಲಕ್ಷ ರೂ. ಮೌಲ್ಯದ ಜಿಪಿಎಸ್ ಉಪಕರಣಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಪಕ್ಷಿಗಳಿಗೆ ಜಿಪಿಎಸ್ ಅಳವಡಿಸುವುದರಿಂದ ಅವುಗಳ ಸಂಚಾರ ಕ್ರಮ ತಿಳಿಯಲು ಸಹಕಾರಿಯಾಗಲಿದೆ.