– ಮಾಜಿ ಸಚಿವರಿಗೆ ಜೈಲಿನಲ್ಲೇ ದೀಪಾವಳಿ
ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಈ ಮೂಲಕ ಮಾಜಿ ಸಚಿವರು ಜೈಲಿನಲ್ಲಿಯೇ ದೀಪಾವಳಿ ಆಚರಿಸುವಂತಾಗಿದೆ.
ಇಂದು ವೀಡಿಯೋ ಕಾನ್ಫರನ್ಸ್ ಮೂಲಕ ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯದ ಎದುರು ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನ.23 ರವರೆಗೆ ಅಂದರೆ ಇಂದಿನಿಂದ 14 ದಿನಗಳ ಕಾಲ ವಿನಯ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಕೊನೆಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್
ಮೂರು ದಿನಗಳ ಸಿಬಿಐ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯದ ಎದುರು ವಿನಯ್ ಅವರನ್ನು ಹಾಜರುಪಡಿಸಬೇಕಾಗಿತ್ತು. ವಿನಯ್ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಅವಾಂತರದಿಂದಾಗಿ ಕೊನೆ ಕ್ಷಣದಲ್ಲಿ ಸಿಬಿಐ ಅಧಿಕಾರಿಗಳು ವೀಡಿಯೋ ಕಾನ್ಫರನ್ಸ್ ಮೂಲಕ ವಿನಯ್ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದರು.ಇದನ್ನೂ ಓದಿ: ಬಿದ್ದು, ಎದ್ದು, ಗೆದ್ದು ಬರುವೆ- ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತೆ: ವಿನಯ್ ಕುಲಕರ್ಣಿ
ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಿನಯ್ ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಸಿಬಿಐ ಅರ್ಜಿ ಸಲ್ಲಿಸಿರಲಿಲ್ಲ. ವಿನಯ್ ಪರ ವಕೀಲರೂ ಜಾಮೀನು ಕೋರಿ ಅರ್ಜಿಯನ್ನೂ ದಾಖಲಿಸಿರಲಿಲ್ಲ. ಹೀಗಾಗಿ ನ್ಯಾಯಾಲಯ ನ.23ರ ವರೆಗೂ ವಿನಯ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದನ್ನೂ ಓದಿ: ನೂರಕ್ಕೆ ನೂರರಷ್ಟು ರಾಜಕೀಯ- ಪಬ್ಲಿಕ್ ಟಿವಿಗೆ ವಿನಯ್ ಕುಲಕರ್ಣಿ ಪ್ರತಿಕ್ರಿಯೆ
ಶನಿವಾರ ಹಾಗೂ ಭಾನುವಾರ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಾಗುತ್ತಿದ್ದು, ಈ ಬೆಳಕಿನ ಹಬ್ಬವನ್ನು ಮಾಜಿ ಸಚಿವ ವಿನಯ್ ಕತ್ತಲಲ್ಲೇ ಆಚರಿಸುವಂತಾಗಿದೆ. ಪ್ರತಿವರ್ಷ ತಮ್ಮದೇ ಒಡೆತನದ ವಿನಯ್ ಡೇರಿಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡುತ್ತಿದ್ದ ವಿನಯ್, ಈ ವರ್ಷ ಜೈಲಿನಲ್ಲಿ ದೀಪಾವಳಿ ಆಚರಣೆ ಮಾಡುವಂತಾಗಿದೆ.