ಮಡಿಕೇರಿ: ಕೊರೊನಾ ಆಯ್ತು ಇದೀಗ ನೆರೆ ಪರಿಹಾರದಲ್ಲೂ ಭ್ರಷ್ಟಾಚಾರ ನಡೆದಿದೆ. ಕಳೆದ ಬಾರಿಯ ನೆರೆಯಲ್ಲಿ ಮನೆ ಕಳೆದು ಕೊಂಡವರಿಗೆ ಬಾಡಿಗೆ ಕೊಡುವುದರಲ್ಲಿ ಗೋಲ್ ಮಾಲ್ ನಡೆದಿದೆ. ಇನ್ನೊಂದು ವಾರದಲ್ಲಿ ಭ್ರಷ್ಟಾಚಾರದ ವರದಿ ಬಿಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೊಡಗಿನಲ್ಲಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೆರೆಯಲ್ಲಿ ಮನೆ ಕಳೆದು ಕೊಂಡವರಿಗೆ ಬಾಡಿಗೆ ನೀಡುವ ವಿಚಾರದಲ್ಲಿ ದೊಡ್ಡ ಗೋಲ್ ಮಾಲ್ ಆಗಿದೆ. ಈ ಕುರಿತು ಅಧ್ಯಯನ ನಡೆಸಲು ತಂಡ ಕಳುಹಿಸುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಇದರ ವರದಿ ತರೀಸಿಕೊಂಡು. ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತು ವಿಶೇಷ ಬಜೆಟ್ ಮಾಡಬೇಕು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಣ ನೀಡಬೇಕು. 25 ಸಂಸದರಿದ್ದಾರೆ. ಇಲ್ಲಿನ ಸಂಸದರು ಸಹ ಎರಡು ಬಾರಿ ಗೆದ್ದಿದ್ದಾರೆ. ಎರಡೂ ಸರ್ಕಾರ ಸೇರೆ 10 ಸಾವಿರ ಕೋಟಿ ರೂ.ಗಳ ಹೂಡಿಕೆ ಮಾಡಬೇಕು. ಈ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು. ಯಾರ್ಯಾರು ಬೆಟ್ಟದ ಕಳೆಗಡೆ ವಾಸಮಾಡುತ್ತಿದ್ದಾರೋ ಅವರನ್ನೆಲ್ಲ ಸ್ಥಳಾಂತರ ಮಾಡಿ, ಉತ್ತಮ ಮನೆಗಳನ್ನು ಕಟ್ಟಿ ಕೊಡಬೇಕು. ರಸ್ತೆಗಳು ಕುಸಿವೆಡೆ ತಡೆಗೋಡೆಗಳನ್ನು ನಿರ್ಮಿಸುವ ಕಾರ್ಯಗಳಾಗಬೇಕು. ಕಳೆದ ಮೂರುವ ವರ್ಷಗಳಿಂದ ಇದೇ ರೀತಿ ಪ್ರವಾಹವಾಗುತ್ತಿದೆ. ಹೀಗಾಗಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದರು.
ಕಳೆದ ಬಾರಿ ಪ್ರವಾಹವಾದ ಸಂದರ್ಭದಲ್ಲಿ ಮನೆ ಹಾನಿಗೀಡಾಗಿದವರಿಗೆ 5 ಲಕ್ಷ ರೂ.ಗಳನ್ನು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಕೊಟ್ಟಿಲ್ಲ, ನಿವೇಶನಗಳನ್ನು ಸಹ ಕೊಟ್ಟಿಲ್ಲ. ಕೊಡಗು ಮಾತ್ರವಲ್ಲ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರದಲ್ಲಿ ಸಹ ನೆರೆ ಪರಿಹಾರ ಕೊಟ್ಟಿಲ್ಲ. ಮಾತಿ ಪ್ರಕಾರ ನಡೆದುಕೊಂಡಿಲ್ಲ. 5 ಸಾವಿರ ರೂ.ಬಾಡಿಗೆ ಕೊಡುತ್ತೇವೆ ಎಂದು ಕೇವಲ ಮೂರು ತಿಂಗಳು ಕೊಟ್ಟರು. ಆಮೇಲೆ ಕೊಡಲಿಲ್ಲ. ಈ ವರೆಗೆ ಅವರಿಗೆ ಮನೆ ಕಟ್ಟಿಸಿಕೊಟ್ಟಿಲ್ಲ.