ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಕ್ರೂರಿತನವನ್ನು ಹತ್ತಿರದಿಂದ ನೋಡಿದ ಹೆಲ್ತ್ ವಾರಿಯರ್ಸ್ ತಮ್ಮ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಶ್ರೀ ಲಕ್ಷ್ಮಿ ಹಾಸ್ಪಿಟಲ್ ವೈದ್ಯರು, ಆಸ್ಪತ್ರೆ ಒಳಗಡೇ ಮುಖ್ಯವಾಗಿ ಆಕ್ಸಿಜನ್ ಸಿಗುತ್ತಿಲ್ಲ. ಮ್ಯಾನ್ ಪವರ್ ಮೊದಲಿಗಿಂತ ಶೇ.30 ರಿಂದ 60 ಕಡಿಮೆಯಾಗಿದೆ. ಒಬ್ಬ ನರ್ಸ್ ಇಟ್ಟುಕೊಂಡು ನಾವು ನೂರು ಜನರನ್ನು ನಿಭಾಯಿಸಬೇಕಾಗಿದೆ. ಒಬ್ಬ ಶಿಫ್ಟ್ ಮ್ಯಾನ್ನನ್ನು ಇಟ್ಟುಕೊಂಡು 10 ಜನರನ್ನು ಶಿಫ್ಟ್ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ನೀವು ಬಿಯು ನಂಬರ್ ಇರುವ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಿ ಅಂತ ಹೇಳುತ್ತಿದೆ. ಆದರೆ ಮೊದಲಿಗೆ ªಚಿಕಿತ್ಸೆಗೆ ಬೇಕಾದ ಸಿಬ್ಬಂದಿ ಸಹಾಯವಿಲ್ಲದೇ ನಾವು ಹೇಗೆ ತೆಗೆದುಕೊಳ್ಳುವುದು ಎಂದು ಪ್ರಶ್ನಿಸಿದರು.
ನಮಗೆ ಆಕ್ಸಿಜನ್, ರೆಮ್ಡಿಸಿವರ್ ಇಂಜೆಕ್ಷನ್ ನೀಡಲು ತೊಂದರೆ ಆಗುತ್ತಿದೆ. ದಿನಕ್ಕೆ 2 ಬಾರಿ ಲಿಕ್ವಿಡ್ ಆಕ್ಸಿಜನ್ ಬೇಕು. ಆದರೆ 2 ದಿನಕ್ಕೊಮ್ಮೆ ಅದು ಸಿಗುತ್ತಿದೆ. ಆಕ್ಸಿಜನ್ ಅವಶ್ಯಕತೆ ಇರುವವರಿಗೆ ನೀಡಲಾಗದೇ ಕಷ್ಟವಾಗುತ್ತಿದೆ. ಇನ್ನೂ ಕಳಪೆ ಮಾದರಿ ಆಕ್ಸಿಜನ್ ನೀಡಿ ಎಷ್ಟೋ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಿಬ್ಬಂದಿಯೊಬ್ಬರು, ಆಸ್ಪತ್ರೆಯಲ್ಲಿ ಆಕ್ಸಿಜನ್ ಕಡಿಮೆಯಾಗುತ್ತಿದೆ. ಎಲ್ಲ ಪೇಷೆಂಟ್ಗಳಿಗೂ ಬೆಡ್ ಹಾಗೂ ಬೆಡ್ ಶೀಟ್ ನೀಡುವುದಕ್ಕೆ ಆಗುತ್ತಿಲ್ಲ. ಏಮರ್ಜೆನ್ಸಿ ವಾರ್ಡ್ನಲ್ಲಿ 4 ಬೆಡ್ ಮಾತ್ರ ಇರುತ್ತದೆ. ಆಸ್ಪತ್ರೆಗೆ ಬಂದ ಏಮರ್ಜೆನ್ಸಿ ಪೇಷಂಟ್ಗಳನ್ನು ಕೂರಿಸಿ ಬಿಡುವುದಕ್ಕೂ ಆಗುವುದಿಲ್ಲ. ಏಮರ್ಜೆನ್ಸಿ ಇದ್ದಾಗ ಆಕ್ಸಿಜನ್, ಇಂಜೆಕ್ಷನ್ ಹಾಕಲೇ ಬೇಕಾಗುತ್ತದೆ. ಅಲ್ಲದೇ ಆಕ್ಸಿಜನ್ ಸಿಗದೇ 18 ವರ್ಷ, 20, 22 ವರ್ಷದವರು ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಸೋಕಿಂತರ ಸಾವು ನಮ್ಮ ಕರಳನ್ನು ಹಿಡುವಂತಾಗುತ್ತಿದೆ ನೋವು ತೋಡಿಕೊಂಡಿದ್ದಾರೆ.