ಬೆಂಗಳೂರು: ನಿನ್ನ ಶುಭಾಶಯಗಳನ್ನು ಮಿಸ್ ಮಾಡುತ್ತಿದ್ದೇನೆ ಚಿರು ಮಗನೇ ಎಂದು ನಟ ಅರ್ಜುನ್ ಸರ್ಜಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಇಂದು ಅರ್ಜುನ್ ಸರ್ಜಾ ಅವರು 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಮೃತ ತಮ್ಮ ತಂಗಿಯ ಮಗ ಚಿರಂಜೀವಿ ಸರ್ಜಾರನ್ನು ನೆನಪು ಮಾಡಿಕೊಂಡಿರುವ ಅರ್ಜುನ್ ಸರ್ಜಾ ಅವರು ಭಾವನಾತ್ಮಕವಾಗಿ ಪೋಸ್ಟ್ ಹಾಕಿಕೊಂಡಿದ್ದಾರೆ. ಜೊತೆಗೆ ಚಿರುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CD6BAVInBiP/
ಇಂದು ಅರ್ಜುನ್ ಸರ್ಜಾ ಅವರು ಚಿರು ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದು, ನನ್ನ ಹುಟ್ಟುಹಬ್ಬದ ದಿನದೊಂದು ನನ್ನ ನೆಚ್ಚಿನ ಹುಡುಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಶುಭಾಶಯಗಳನ್ನು ಮಿಸ್ ಮಾಡುತ್ತಿದ್ದೇನೆ ಚಿರು ಮಗನೇ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿರು ಜೊತೆ ನಿಂತಿರುವ ಮತ್ತು ಚಿರುವಿಗೆ ಅರ್ಜುನ್ ಸರ್ಜಾ ಅವರೇ ಮೇಕಪ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಲಾಕ್ಡೌನ್ ವೇಳೆ ಮನೆಯವರ ಜೊತೆ ಕಾಲಕಳೆಯುತ್ತಾ, ಆಟವಾಡುತ್ತಾ ಚೆನ್ನಾಗಿದ್ದ ಚಿರು, ಬಹುವೇಗವಾಗಿ ನಮ್ಮನ್ನು ಅಗಲುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಹೃದಯಾಘಾತಕ್ಕೆ ಒಳಗಾದ ಚಿರು, ಜೂನ್ 07ರಂದು ಚಿರನಿದ್ರೆಗೆ ಜಾರಿಬಿಟ್ಟಿದ್ದರು. ಈ ಮೂಲಕ ತೋಳಿಗೆ ತೋಳು ಕೊಟ್ಟು ಜೊತೆಗೆ ನಿಂತಿದ್ದ ತಮ್ಮ, 10 ವರ್ಷ ಪ್ರೀತಿಸಿ ಮದುವೆಯಾಗಿದ್ದ ಪತ್ನಿ, ಜೇನುಗೂಡಿನಂತ ಕೂಡುಕುಟುಂಬವನ್ನು ಬಿಟ್ಟು ಹೋಗಿದ್ದಾರೆ.
ಪ್ರೀತಿಸಿ ಮದುವೆಯಾದ ಚಿರುವನ್ನು ಕಳೆದುಕೊಂಡು ಅವರ ಪ್ರತಿರೂಪವನ್ನು ಉದರದಲ್ಲಿ ಅಪ್ಪಿಕೊಂಡು ಮೇಘನಾ ಅವರು ದಿನದೂಡುತ್ತಿದ್ದಾರೆ. ಪತಿಯ ಹೆಸರು ತನ್ನ ಹೆಸರಿನಲ್ಲಿ ಬೆರೆತು ಹೋಗಲಿ ಎಂದು ಮೇಘನಾ ರಾಜ್ ಎಂದು ಇದ್ದ ಅವರ ಹೆಸರನ್ನು ಮೇಘನಾ ರಾಜ್ ಸರ್ಜಾ ಎಂದು ಬದಲಿಸಿಕೊಂಡಿದ್ದಾರೆ. ಚಿರು ಬಿಟ್ಟು ಹೋದ ನೆನಪುಗಳನ್ನು ಬಿಗಿದಪ್ಪಿಕೊಂಡು ಮಗುವಿನ ರೂಪದಲ್ಲಿ ಚಿರು ಹಬ್ಬೆಗಾಲಿಟ್ಟು ಬರುವುದನ್ನು ಕಾಯುತ್ತಿದ್ದಾರೆ.
ಇತ್ತ ಅಣ್ಣ ಕೊನೆಯವರೆಗೂ ನನ್ನ ಕಣ್ಣಮುಂದೆ ಇರಲಿ ಎಂದು ತನ್ನದೇ ತೋಟದಲ್ಲಿ ಅಣ್ಣನ ಅಂತ್ಯಸಂಸ್ಕಾರ ಮಾಡಿದ ನಟ ಧ್ರುವ ಸರ್ಜಾ, ಅಣ್ಣನ ನೆನಪಿನಲ್ಲಿ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸೋತು ಕೂತಿರುವ ಅತ್ತಿಗೆಯ ನೆರವಿಗೆ ನಿಂತಿದ್ದಾರೆ. ಇತ್ತ ಮಗನಂತಿದ್ದ ತಂಗಿಯ ಮಗನನ್ನು ಕಳೆದಕೊಂಡ ನಟ ಅರ್ಜುನ್ ಸರ್ಜಾ ಮಿಸ್ ಯೂ ಮೈ ಬಾಯ್ ವಿಧಿ ತುಂಬಾ ಕ್ರೂರಿ ಎಂದು ಚಿರು ಸಾವಿನ ನಂತರ ಪೋಸ್ಟ್ ಹಾಕಿಕೊಂಡಿದ್ದರು.