ರಾಮನಗರ: ನಾನು ಯಾರ ಋಣದಲ್ಲಿಯೂ ಸಿಎಂ ಆಗಿರಲಿಲ್ಲ. ಅವರೇ ನನ್ನ ಮನೆ ಬಾಗಿಲಿಗೆ ಬಂದು ನೀವೇ ಸಿಎಂ ಆಗಿ ಅಂತ ಕೇಳಿಕೊಂಡಿದ್ರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ನಾಯಕರು ರಾಮನಗರದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರನ್ನ ಸಿಎಂ ಮಾಡಿ ಕೆಲವರು ಬಾರಿ ಬೆಂಬಲ ಕೊಟ್ಟಿದ್ರು. ಯಾರಿಂದ ಅಧಿಕಾರ ಕಳೆದುಕೊಂಡೆ ಅಂತ ನನಗೆ ಗೊತ್ತು. ಕೆಲವರು ಕುಮಾರಸ್ವಾಮಿ ಅವರನ್ನ ಉಳಿಸಿದ್ದೇ ನಾವು ಎಂದು ಪ್ರಚಾರ ಪಡೆದುಕೊಂಡಿದ್ದಾರೆ ಅಂತಾನು ಗೊತ್ತು. ಇದೀಗ ನಮ್ಮ ಪಕ್ಷ ಮುಗಿಸುತ್ತೇವೆ ಎಂದು ಕೆಲವರು ಹೊರಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರ ಹೆಸರು ಹೇಳದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನನ್ನದು ಒಂದು ಸಣ್ಣ ಪಕ್ಷ ಇದೆ, ರೈತರ ಪಕ್ಷ. ಈ ಪಕ್ಷವನ್ನ ದಿವಾಳಿ ಮಾಡಿ ಇನ್ಯಾರಿಗೋ ಅಧಿಕಾರ ಕೊಡಲು ಓಡಾಡಲ್ಲ. ರಾಜ್ಯದಲ್ಲಿ ಯಾವ ಮೈತ್ರಿಯೂ ಇಲ್ಲ. ರಾಜ್ಯಸಭೆ ಚುನಾವಣೆ ಬಗ್ಗೆ ಯಾವುದೇ ಪಕ್ಷದಿಂದ ಯಾವುದೇ ನಿರ್ಧಾರ ಮಾಡಿಲ್ಲ. ದೇವೇಗೌಡರು ಸಹ ಯಾವುದೇ ತೀರ್ಮಾನ ಮಾಡಿಲ್ಲ. ದೇವೇಗೌಡರು ಜನರ ಮಧ್ಯೆ ಹೋಗಿ ಚರ್ಚೆ ಮಾಡಿ ತಿರ್ಮಾನ ಮಾಡುತ್ತಾರೆ. ಅವರು ಯಾವತ್ತೂ ಹಿಂಬಾಗಿಲಿನ ರಾಜಕಾರಣ ಮಾಡಿಲ್ಲ. ಕೆಲವು ಗಾಳಿ ಸುದ್ದಿಗಳಿವೆ ಅದರ ಬಗ್ಗೆ ಚರ್ಚೆ ಬೇಡ. ಕಾಂಗ್ರೆಸ್ ಪಕ್ಷದ ಜೊತೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಶ್ರೀರಾಮಲುಗೆ ಅದ್ಧೂರಿ ಸ್ವಾಗತ ಸಂಬಂಧ ಮಾತನಾಡಿದ ಹೆಚ್ಡಿಕೆ, ಕೊರೊನಾ ಕಾಯಿಲೆಯಿಂದ ಜನ ನರಳುತ್ತಿದ್ದಾರೆ. ಈ ಸಮಯದಲ್ಲಿ ಮೆರವಣಿಗೆ ಮೂಲಕ ಬಾಗಿನ ಅರ್ಪಿಸಿ ಸಮಯ ವ್ಯರ್ಥ ಮಾಡ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ಪರವಾಗಿ ಕೆಲಸ ಮಾಡಬೇಕು. ಈ ಸರ್ಕಾರದಲ್ಲಿ ಇರುವಂತಹ ಮಂತ್ರಿಗಳು ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು ಎಂದು ಗರಂ ಆದರು.
ರೇಷ್ಮೆ ಬೆಳೆಗಾರರು, ರೈತರು ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದಾರೆ. ಇದೀಗ ಬಾಗಿನ ಬಿಟ್ಟು ಪ್ರಚಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಜವಾಬ್ದಾರಿ ಇರುವಂತಹ ಮಂತ್ರಿಗಳು ಈ ರೀತಿ ಕೆಲಸ ಮಾಡಿದ್ರೆ ಹೇಗೆ. ಸಾರ್ವಜನಿಕರು ಯಾವ ರೀತಿ ಮಾಡ್ತಾರೆ ಹೇಳಿ? ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ನಾನು ಕೂಡ ಹೇಳ್ತೀನಿ. ನನ್ನ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರ ಕಾಯ್ದುಕೊಳ್ತಿಲ್ಲ. ಜನರಿಗೆ ಅರಿವು ಮೂಡಬೇಕು ಎಂದು ಸಚಿವ ರಾಮುಲು ವಿರುದ್ಧ ಮಾಜಿ ಸಿಎಂ ಕಿಡಿಕಾರಿದರು.