ಬೆಂಗಳೂರು: ಹುಡುಗ ನಮ್ಮವನಾಗಿದ್ದು, ನನಗೆ ಆತ ದೂರದ ಸಂಬಂಧಿ ಎಂದು ಜೆಡಿಎಸ್ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿರುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆ ಹುಡುಗ ನಮ್ಮ ಹುಡುಗ. ನನಗೆ ದೂರದ ಸಂಬಂಧಿ. ನನ್ನ ಹೆಗಲ ಮೇಲೆ ಕೈ ಹಾಕೋಕೆ ಬಂದ. ಯಾರಾದ್ರು ನೋಡಿದ್ರೆ ಏನ್ ಅನ್ನುತ್ತಾರೆ ಹೇಳಿ. ಅದಕ್ಕೆ ಸ್ವಲ್ಪ ಜೋರಾಗಿ ಹೊಡೆದಿದ್ದೇನೆ ಎಂದರು.
ಅವರು ನಮ್ಮ ಮನೆ ಹುಡಗರು ಇರಲಿ. ನಾನು ಬೈದ್ರೆ ಅವನು ಬೈಕೋತಾನೆ, ಅವನು ಬೈದ್ರೆ ನಾನು ಬೈದುಕೊಳ್ತೀನಿ. ಅದು ನನ್ನ ಅವನ ಸಂಬಂಧ. ಅವನು ಕೈಹಾಕಲಿಲ್ಲ ಅಂದ್ರೆ ಕೈ ಏಕೆ ಮೇಲೆ ಬಂತು?. ಈಗ ಯಾಕೆ ಅವನ ಮೇಲೆ ಚರ್ಚೆ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ರಾಜಕೀಯ ಕ್ಷೇತ್ರದಲ್ಲಿರುವ ನಾವು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲ್ಲ: ಕಟೀಲ್
ನಮ್ಮ ಹುಡುಗರು. ನಾವು ತಪ್ಪು ಮಾಡುತ್ತೇವೆ, ಅವರೂ ತಪ್ಪು ಮಾಡುತ್ತಾರೆ. ನಿಮಗೇನು ಖುಷಿಗೆ ತೋರಿಸುತ್ತಿದ್ದೀರಾ. ಅವನನ್ನು ಲೀಡರ್ ಮಾಡಿ. ಅವನಿಗೂ ಮುಂದಿನ ಚುನಾವಣೆಗೆ ಟಿಕೆಟ್ ಸಿಗುವಂತೆ ಮಾಡಿ ಎಂದು ಗರಂ ಆದರು.
ಆಗಿದ್ದೇನು..?
ಕೆ.ಎಂ ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ. ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಡಿಕೆಶಿ ಬಂದಿದ್ದರು. ಈ ವೇಳೆ ಆಸ್ಪತ್ರೆಯ ಒಳಗಡೆಗೆ ಬರುವ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಡಿಕೆಶಿ ಹೆಗಲ ಮೇಲೆ ಕೈ ಹಾಕಲು ಪ್ರಯತ್ನಿಸಿದರು. ಕೂಡಲೇ ಕಾರ್ಯಕರ್ತನ ತಲೆಯ ಮೇಲೆ ಪಟಾರ್ ಎಂದು ಡಿಕೆ ಶಿವಕುಮಾರ್ ಹೊಡೆದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇತ್ತ ಈ ವಿಚಾರಕ್ಕೆ ಬಿಜೆಪಿ ಭಾರೀ ಟೀಕೆ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ – ಬಿಜೆಪಿ ಟಾಂಗ್