ಬೆಂಗಳೂರು: ಸಚಿವರೊಬ್ಬರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ನಗರದಲ್ಲಿ ದೊಡ್ಡ ಅಣಕು ಸಿಡಿಯನ್ನು ಸುಟ್ಟುಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ದೊಡ್ಡ ಅಣಕು ಸಿಡಿಯನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಡಿ ಒಂದು ರೀತಿಯಲ್ಲಿ ದೊಡ್ಡ ಬ್ಲಾಕ್ಮೇಲ್. ನಾವು ಇಂದು ಪ್ರತಿಭಟನೆ ನಡೆಸುವ ಮೂಲಕ ಸಿಡಿ ಬೇಡ ಎಂದು ಹೇಳುತ್ತಿದ್ದೇವೆ. ಆದರೆ ಈ ಮೂಲಕ ನಾವು ಮಾಜಿ ಸಚಿವರ ಬೆಂಬಲಿಸುತ್ತಿಲ್ಲ. ಕೋರ್ಟ್ನಲ್ಲಿ ಅರ್ಜಿ ಹಾಕಿರುವವರಿಗೂ ಬೆಂಬಲ ನೀಡುತ್ತಿಲ್ಲ. ಯಡಿಯೂರಪ್ಪನವರಿಗೂ ನಮ್ಮ ಬೆಂಬಲ ಇಲ್ಲ ಎಂದು ಹೇಳಿದರು.
ಬಜೆಟ್ ಮಂಡನೆ ಮಾಡಲು ಯಡಿಯೂರಪ್ಪನವರಿಗೆ ಯೋಗ್ಯತೆ ಇಲ್ಲ. ಈ ಸರ್ಕಾರ ಅತಿ ಭ್ರಷ್ಟ ಸರ್ಕಾರ. ಈ ಸಿಡಿ ಮುಂದೆ ಒಂದು ಸುಪಾರಿಯಾಗಬಹುದು. ಸಿಡಿ ಇಟ್ಟುಕೊಂಡು ಸರ್ಕಾರ ಉರಳಿಸುವ ತಂತ್ರ ಕೂಡ ನಡೆಯಬಹುದು. ಭ್ರಷ್ಟರನ್ನು ಹತ್ತಿಕಲು ನಾವು ಲೋಕಾಯುಕ್ತಾರನ್ನು ತರಬೇಕು. ಲೋಕಾಯುಕ್ತಕ್ಕೆ ಶಕ್ತಿ ನೀಡಬೇಕು. ಲೋಕಾಯುಕ್ತಕ್ಕೆ ಬಹಳ ಶಕ್ತರನ್ನು ತರಬೇಕು. ಲೋಕಾಯುಕ್ತಕ್ಕೆ ಸಿಎಂ ನೇಮಕ ಮಾಡುವಂತಾಗಬಾರದು. ಭ್ರಷ್ಟರ ಎದೆ ನಡುಗಿಸುವ ಲೋಕಯುಕ್ತ ನಮಗೆ ಬೇಕಾಗಿದೆ ಎಂದರು.
ಸಿಡಿ ಒಂದು ಕೆಟ್ಟ ಸಂಸ್ಕೃತಿ ಇದು ತೊಲಗಲಿ ಎಂಬ ಕಾರಣಕ್ಕೆ ಸಿಡಿ ಸುಡುತ್ತಿದ್ದೇವೆ ಎಂದು ಹೇಳಿದರು.