ನವದೆಹಲಿ: 40 ವರ್ಷದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಹೊರವಲಯ ಸಿಂಘು ಗಡಿಯಲ್ಲಿ ನಡೆದಿದೆ. ವಿಷ ಸೇವಿಸದ ರೈತನನ್ನು ಹತ್ತಿರದ ಸೋನೆಪತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರೈತ ಶನಿವಾರ ಸಂಜೆ 7.30ರ ವೇಳೆಗೆ ಪ್ರಾಣಬಿಟ್ಟಿದ್ದಾರೆ. ಮೃತಪಟ್ಟ ರೈತ ಪಂಜಾಬ್ನ ಘತೇಘಡ್ ಸಾಹಿಬ್ ನಿವಾಸಿ ಅಮರಿಂಧರ್ ಸಿಂಗ್(40) ಎಂದು ಗುರುತಿಸಲಾಗಿದೆ.
ಅಮರಿಂದರ್ ನಿಧನಕ್ಕೂ ಒಂದು ಗಂಟೆ ಮುನ್ನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೂ ಈ ಕುರಿತಂತೆ ಪೊಲೀಸರು ಮುಂಜಾಗ್ರತ ಕ್ರಮವಹಿಸಲಿಲ್ಲ. ಇದೀಗ ಈ ವಿಚಾರವಾಗಿ ತನಿಖೆ ಆರಂಭಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ಹರಿಯಾಣ ಮತ್ತು ಪಂಜಾಬ್ ಮೂಲದ ಸಾವಿರಾರು ರೈತರು ಕಳೆದ 30ಕ್ಕೂ ಅಧಿಕ ದಿನಗಳಿಂದ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಇಲ್ಲಿಯವರೆಗೂ ರೈತ ಸಂಘಟನೆಗಳೊಂದಿಗೆ ಏಳು ಸುತ್ತಿನ ಸಭೆ ನಡೆಸಿದ್ದು ಎಲ್ಲವೂ ವಿಫಲಗೊಂಡಿದೆ.
ಈ ಹಿಂದೆ ಘಾಜಿಯಾಬಾದ್ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ವೇಳೆ ಉತ್ತರ ಪ್ರದೇಶದ ರಾಮ್ಪುರ್ ಜಿಲ್ಲೆಯ ನಿವಾಸಿ ಕಾಶ್ಮೀರ್ ಸಿಂಗ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಪಂಜಾಬ್ನ ಫಾಸಿಲ್ಕ್ ಜಿಲ್ಲೆಯ ಜಲಲಬಾದ್ನಲ್ಲಿ ವಕೀಲರಾಗಿದ್ದ ಅಮರ್ಜಿತ್ ಸಿಂಗ್ ಟಕ್ರಿ ಗಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಹಾಗೂ ಡೆತ್ ನೋಟ್ನಲ್ಲಿ ರೈತರ ಆಂದೋಲನಕ್ಕೆ ಬೆಂಬಲಿಸುವ ಸಲುವಾಗಿ ನನ್ನ ಪ್ರಾಣವನ್ನು ತ್ಯಾಗ ಮಾಡುತ್ತಿದ್ದೇನೆ ಎಂದು ಬರೆದಿದ್ದರು.
ಕಳೆದ ವರ್ಷ ಡಿಸೆಂಬರ್ 21ರಂದು ಸಿಂಘು ಗಡಿಯ ಪ್ರತಿಭಟನೆ ವೇಳೆ 65 ವರ್ಷದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದನು. ಜೊತೆಗೆ ಡಿಸೆಂಬರ್ 20ರಂದು ಪಂಜಾಬ್ನ ಬಟಿಂಡಾದ ದಯಾಲ್ಪುರ ಮಿರ್ಜಾ ಗ್ರಾಮದ ನಿವಾಸಿಯಾದ ಗುರ್ಲಾಬ್ ಸಿಂಗ್ ಎಂಬ ರೈತ ದೆಹಲಿ ಗಡಿಯಲ್ಲಿ ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.