– ಅಂಗಡಿ ಕುಟುಂಬಸ್ಥರಿಗೆ ಸಿಎಂ ಸಾಂತ್ವನ
ಬೆಳಗಾವಿ: ದಿವಂಗತ ಸುರೇಶ್ ಅಂಗಡಿಯವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬಿ.ಎಸ್.ಯಡಿಯೂಪ್ಪನವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇಂದು ಬೆಳಗ್ಗೆ ಬೆಳಗಾವಿಯ ಸದಾಶಿವ ನಗರದಲ್ಲಿರುವ ಮನೆಗೆ ಭೇಟಿ ಮುಖ್ಯಮಂತ್ರಿಗಳು, ದಿ.ಸುರೇಶ್ ಅಂಗಡಿಯವರ ಪತ್ನಿ ಮಂಗಲಾ, ತಾಯಿ ಸೋಮವ್ವಾ, ಪುತ್ರಿಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ದಿ.ಸುರೇಶ್ ಅಂಗಡಿ ಒಬ್ಬ ಅಜಾತ ಶತ್ರು, ಸರಳ ಸಜ್ಜನಿಕೆ ಪ್ರಾಮಾಣಿಕ ವ್ಯಕ್ತಿ ಆಗಿದ್ರು. ರೈಲ್ವೆ ಸಚಿವರಾಗಿ ಕೇವಲ ಒಂದೇ ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದ ಕೆಲಸ ಮಾಡಿಕೊಡಲು ಹಗಲು ರಾತ್ರಿ ಕೆಲಸ ಮಾಡಿದವರು. ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಅವರಿಗೆ ಯಾವ ರೀತಿ ಸಾಂತ್ವನ ಹೇಳೋದು ಅಂತಾ ತಿಳಿಯುತ್ತಿಲ್ಲ ಎಂದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಆತ್ಮೀಯ ಸ್ನೇಹಿತ ಸುರೇಶ್ ಅಂಗಡಿ ನಮ್ಮನ್ನ ಅಗಲಿದ್ದಾರೆ ಅನ್ನುವುದನ್ನ ಕಲ್ಪನೆ ಮಾಡಿಕೊಳ್ಳಲು ಆಗುತ್ತಿಲ್ಲ. ನಾಲ್ಕು ಬಾರಿ ಸಂಸದರು, ರೇಲ್ವೆ ಸಚಿವರಾಗಿ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಪಾರ. ತಕ್ಷಣ ಸರಿಯಾದ ಚಿಕಿತ್ಸೆ ಪಡೆಯದೇ ದೆಹಲಿಯಲ್ಲಿ ಎರಡು ದಿನ ತಡ ಮಾಡಿದ್ದಾರೆ. ದೆಹಲಿಯಲ್ಲಿ ಸುರೇಶ್ ಅಂಗಡಿ ಸಮಾಧಿ ಇರುವ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮನವಿ ಮಾಡಲಾಗಿದೆ. ಅದು ನಮ್ಮ ಕರ್ತವ್ಯ ಆಗಿದ್ದು, ಈಗಾಗಲೇ ದೆಹಲಿಯಲ್ಲಿರುವ ರಾಜ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನ ಎಂದು ತಿಳಿಸಿದರು.
ಇತ್ತೀಚೆಗೆ ದೈವಾಧೀನರಾದ ಹಿರಿಯ ನಾಯಕರು, ಕೇಂದ್ರ ಸಚಿವರು, ಆತ್ಮೀಯ ಸ್ನೇಹಿತರೂ ಆಗಿದ್ದ ಶ್ರೀ ಸುರೇಶ್ ಅಂಗಡಿಯವರ ಬೆಳಗಾವಿಯ ನಿವಾಸಕ್ಕೆ ಇಂದು ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ, ಸಂತಾಪ ಸೂಚಿಸಲಾಯಿತು. ಹಿರಿಯ ಸಚಿವರುಗಳು ಜೊತೆಗಿದ್ದರು.
ಶ್ರೀ ಅಂಗಡಿಯವರಿಲ್ಲ ಎಂದು ನಂಬಲಾಗುತ್ತಿಲ್ಲ, ಅವರ ಸಾಧನೆ, ಸೇವೆಗಳು ಚಿರಸ್ಮರಣೀಯವಾಗಿದೆ. pic.twitter.com/jvVhCa1Gnu
— B.S.Yediyurappa (@BSYBJP) October 7, 2020
ಯಡಿಯೂರಪ್ಪನವರಿಗೆ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಸೇರಿದಂತೆ ಸ್ಥಳೀಯ ಶಾಸಕರು ಸಾಥ್ ನೀಡಿದರು.