– ಬೆಲ್ಲದ್ ಅವರನ್ನ ಸಮರ್ಥಿಸಿಕೊಂಡ ಸಚಿವರು
ಯಾದಗಿರಿ: ಮೂಗು ಇರುವ ತನಕ ನೆಗಡಿ ತಪ್ಪಲ್ಲ, ದೆಹಲಿಗೆ ಯಾರು ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ? ನಮ್ಮ ಪಕ್ಷದ ಕೇಂದ್ರ ಸ್ಥಾನ ದೆಹಲಿ. ಹೀಗಾಗಿ ಒಬ್ಬ ರಾಜಕಾರಣಿಯಾಗಿ ಕೇಂದ್ರ ಸ್ಥಾನಕ್ಕೆ ಹೋಗಬಾರದಾ ಎಂದು ಶಾಸಕ ಅರವಿಂದ್ ಬೆಲ್ಲದ್ ಅವರ ನಡೆಯನ್ನು ಸಚಿವ ಆರ್.ಶಂಕರ್ ಸಮರ್ಥಿಸಿಕೊಂಡಿದ್ದಾರೆ.
ಯಾದಗಿರಿ ಸರ್ಕಿಟ್ ಹೌಸ್ ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೆಹಲಿಗೆ ಹೋಗವರೆಲ್ಲಾ ಮುಖ್ಯಮಂತ್ರಿ ಬದಲಾವಣೆಗೆ ಹೋಗುತ್ತಾರೆತೇ? ಒಬ್ಬ ರಾಜಕಾರಣಿ ದೆಹಲಿಗೆ ಹೋಗ ಬಂದಾಗಲೂ ಒಬ್ಬ ಮುಖ್ಯಮಂತ್ರಿ ಬದಲಾವಣೆ ಆಗಬೇಕು. ದೆಹಲಿಗೆ ಹೋಗೋದು ಅವರ ವೈಯಕ್ತಿ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಬೇಕಾಗಿಲ್ಲ ಎಂದರು.
ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ. ಮುಂದಿನ ಚುನಾವಣೆಗೂ ಸಹ ಅವರ ನಾಯಕತ್ವದಲ್ಲಿ ಹೋಗುತ್ತೇವೆ ಎಂದು ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದರು.
ಶುಕ್ರವಾರ ತಡರಾತ್ರಿಯೇ ಶಾಸಕ ಅರವಿಂದ್ ಬೆಲ್ಲದ್ ಅವರು ರಾಷ್ಟ್ರ ರಾಜಧಾನಿಗೆ ಪಯಣ ಬೆಳೆಸಿದ್ದು, ದೆಹಲಿಯ ಖಾಸಗಿ ಹೋಟೆಲ್ನಲ್ಲಿ ತಂಗಿದ್ದಾರೆ. ಆದರೆ `ನಾನೇ ಸಿಎಂ’ ಎಂಬ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆ ಬೆನ್ನಲ್ಲೇ ಬೆಲ್ಲದ್ ದೆಹಲಿಗೆ ತೆರಳಿರುವುದು ಭಾರೀ ಕುತೂಹಲ ಮೂಡಿಸಿತ್ತು. ಕಳೆದ ಮೇ 24 ರಂದು ಸಚಿವ ಸಿ.ಪಿ ಯೋಗೇಶ್ವರ್ ಜೊತೆ ಬೆಲ್ಲದ್ ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಿರಲಿಲ್ಲ. ಈಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ಬೆನ್ನಲ್ಲೇ ದೆಹಲಿಗೆ ಬೆಲ್ಲದ್ ದೌಡಾಯಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ನಾಯಕತ್ವ ಬದಲಾವಣೆ ವಿಚಾರ ಕೋವಿಡ್ ಗಿಂತಲೂ ಅಪಾಯಕಾರಿ: ಮುರುಘಾ ರಾಜೇಂದ್ರಸ್ವಾಮೀಜಿ
ಅರವಿಂದ್ ಬೆಲ್ಲದ್ ಸ್ಪಷ್ಟನೆ: ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ನನ್ನ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಷ್ಟ್ರೀಯ ನಾಯಕರ ಭೇಟಿಗಾಗಲಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ. ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ ಬಂದಿದ್ದಾರೆ ಎನ್ನುವ ರೀತಿ ಸುದ್ದಿ ಹರಡಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಕುರಿತು ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಹೀಗಾಗಿ ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಅರವಿಂದ್ ಬೆಲ್ಲದ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆ – ಮತ್ತೆ ದೆಹಲಿಗೆ ತೆರಳಿದ ಶಾಸಕ ಬೆಲ್ಲದ್