ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ದುರ್ಗೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಿಡಿಗೇಡಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ.
ನಟಿಯ ಈ ವಿಡಿಯೋದಿಂದಾಗಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಭೆಯುಂಟಾಗಿದ್ದು, ಅವರ ಸಾಮಾಜಿಕ ಜಾಲತಾಣದ ಪೋಸ್ಟ್ಗೆ ಹಲವರು ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಹಲವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಂಚಿಕೊಂಡಿರುವ ವಿಡಿಯೋದಲ್ಲಿ ದುರ್ಗೆ ಅವತಾರದಲ್ಲಿ ಕಾಣಿಸಿಕೊಂಡಿದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ನುಸ್ರತ್ ಜಹಾನ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದು, ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಹೀಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದೂ ಧಾಮಿಕ ಹೆಸರನ್ನು ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ತಮ್ಮ ಹೆಸರಿನ ಮುಂದಿರುವ ಜಹಾನ್ ತೆಗೆಯುವಂತೆ ಒತ್ತಾಯಿಸಿದ್ದಾರೆ. ಮಹಾಲಯ ಅಮವಾಸ್ಯೆ ಹಿನ್ನೆಲೆ ನುಸ್ರತ್ ಅವರು ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಹಂಚಿಕೊಂಡಿದ್ದರು. ಫೋಟೋಗಳನ್ನು ಸಹ ಹಂಚಿಕೊಂಡಿದ್ದರು.
ಇದಕ್ಕೆ ಕಮೆಂಟ್ ಮಾಡಿರುವ ವ್ಯಕ್ತಿ, ನಿಮ್ಮ ಸಾವಿನ ಸಮಯ ಹತ್ತಿರ ಬಂದಿದೆ. ಅಲ್ಲಾಗೆ ಭಯಪಡಿ, ನಿಮ್ಮ ದೇಹವನ್ನು ಮುಚ್ಚಿಡಲು ಸಾಧ್ಯವಿಲ್ಲವೇ? ಚೀ ಚೀ ಚೀ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ಹೆಸರನ್ನು ನುಸ್ರತ್ ಜಹಾನ್ ಬದಲಿಗೆ ನುಸು ದಾಸ್/ಸೇನ್/ಘೋಷ್ ಎಂಬ ಹಿಂದೂ ಹೆಸರಿಗೆ ಬದಲಿಸಿಕೊಳ್ಳಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.
ನುಸ್ರತ್ ಜಹಾನ್ ಅವರು ಮುಸ್ಲಿಂ ಆದರೂ ಕುಂಕುಮ, ಬಳೆ ಧರಿಸುತ್ತಾರೆ. ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಪಾಲಿಸುತ್ತಾರೆ. ನುಸ್ರತ್ ಜಹಾನ್ ಕುರಿತು ಕಿಡಿಗೇಡಿಗಳು ಆಗಾಗ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚೆಗೆ ಸಂಸತ್ನಲ್ಲಿ ಬಳೆ, ಕುಂಕುಮ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಸಹ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು. ಆದರೆ ನುಸ್ರತ್ ಅವರು ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ.