ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಿ.ಎಸ್.ಜಯದೇವ್ ಅವರು ನಡೆಸುತ್ತಿರುವ ದೀನಬಂಧು ಆಶ್ರಮದ 30 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ.
ದೀನಬಂಧು ಶಾಲೆಯನ್ನು ಈಗಾಗಲೇ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದ್ದು, ಪಾಸಿಟಿವ್ ಬಂದಿರುವ ಮಕ್ಕಳಲ್ಲಿ ಎ ಸಿಂಪ್ಟಮ್ಯಾಟಿಕ್ ಲಕ್ಷಣಗಳು ಕಾಣಿಸಿಕೊಂಡಿದೆ. ಆಶ್ರಮದಲ್ಲಿ ಒಟ್ಟು 70 ಮಕ್ಕಳಿದ್ದು, 30 ಮಂದಿಗೆ ಪಾಸಿಟಿವ್ ಆಗಿದೆ. ಪಾಸಿಟಿವ್ ಬಂದ ಮಕ್ಕಳನ್ನು ದೀನಬಂಧು ಶಾಲೆಗೆ ಶಿಪ್ಟ್ ಮಾಡಲಾಗಿದೆ.
ಉಳಿದ 40 ಮಕ್ಕಳು ದೀನಬಂಧು ಆಶ್ರಮದಲ್ಲೇ ಕ್ವಾರಂಟೈನ್ ಮಾಡಲಾಗಿದೆ. ದೀನ ಬಂಧು ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದ್ದು, ಸಂಸ್ಥೆಯಿಂದ ನರ್ಸ್ ಗಳ ನೇಮಕಾತಿ ಕೂಡ ನಡೆಸಲಾಗಿದೆ. ಸರ್ಕಾರಿ, ಖಾಸಗಿ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ ಕೊಡುವ, ನಿಗಾವಹಿಸುವ ಕೆಲಸ ನಡೆದಿದೆ. ಆಶ್ರಮದಲ್ಲಿದ್ದ ಎಲ್ಲಾ ಮಕ್ಕಳಿಗೂ ಕೂಡ ಕೊರೊನಾ ಟೆಸ್ಟ್ ನಡೆಸಲು ಸಂಸ್ಥೆ ನಿರ್ಧರಿಸಿದೆ.