– ರಂಜಾನ್ ಮರುದಿನವೇ ಹರಿದಿತ್ತು ನೆತ್ತರು
ಚಾಮರಾಜನಗರ: ಜಿಲ್ಲೆ ಗುಂಡ್ಲುಪೇಟೆಯಲ್ಲಿ ರಂಜಾನ್ ಮರುದಿನವೇ ನಡೆದಿದ್ದ ಮೂವರ ಬರ್ಬರ ಹತ್ಯೆ ಪ್ರಕರಣದ ಪ್ರಮುಖ 15 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಕೇವಲ ಎಂಟು ದಿನದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮೇ 26ರ ರಾತ್ರಿ ಗುಂಡ್ಲುಪೇಟೆ ಜಾಕೀರ್ ಹುಸೇನ್ ನಗರದಲ್ಲಿ ಇನಾಯತ್ ಹಾಗೂ ನೂರುಲ್ಲಾಗೆ ಸೇರಿದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.
ಹಳೆ ದ್ವೇಷ, ದನ ಸಾಗಾಟ, ಹೊಟೇಲ್ ವ್ಯವಹಾರ, ಹಣಕಾಸು ವ್ಯವಹಾರಗಳಲ್ಲಿ ಪೈಪೋಟಿ ಹಿನ್ನೆಲೆಯಲ್ಲಿ ಆಗಾಗ್ಗೆ ಗಲಾಟೆ ಘರ್ಷಣೆಗಳು ನಡೆದು ಮೇ.26 ರಂದು ಈ ಗಲಾಟೆ ತಾರಕ್ಕಕ್ಕೇರಿತ್ತು. ಅಂದು ರಾತ್ರಿ ಇನಾಯತ್ ಗುಂಪಿನವರು ನೂರುಲ್ಲಾ ಗುಂಪಿಗೆ ಸೇರಿದ ಮೂವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಘಟನೆಯಲ್ಲಿ ಐವರು ಮಾರಣಾಂತಿಕವಾಗಿ ಗಾಯಗೊಂಡಿದ್ದರು.
ಪ್ರಕರಣ ಬೇಧಿಸಲು ಹೆಚ್ಚುವರಿ ಎಸ್ಪಿ ಅನಿತಾ ಹದ್ದಣ್ಣನವರ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ವಿವಿಧೆಡೆ ತಲೆಮರೆಸಿಕೊಂಡಿದ್ದ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಮೂವರಿಗೆ ಶೋಧ ಕಾರ್ಯ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.