ಬೆಂಗಳೂರು: ತಾಯಿ ಮತ್ತು ಅಜ್ಜಿಯ ಕೊಲೆಯನ್ನು ತನ್ನ ಅಳುವಿನ ಮೂಲಕ 4 ತಿಂಗಳ ಮಗು ನೆರೆಹೊರೆಯವರನ್ನು ಎಚ್ಚರಿಸಿದ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ಬೆಂಗಳೂರು ಗ್ರಾಮೀಣ ಪ್ರದೇಶವಾದ ಬೈಚಾಪುರದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತ ದುರ್ದೈವಿಗಳನ್ನು ರಾಮಾದೇವಿ ಹಾಗೂ ಅವರ ತಾಯಿ ಲಕ್ಷ್ಮಿ ದೇವಿ ಎಂದು ಗುರುತಿಸಲಾಗಿದೆ. ರಮಾದೇವಿ 4 ತಿಂಗಳ ಪುಟ್ಟ ಕಂದಮ್ಮ ಜೋರಾಗಿ ಅಳುತ್ತಿರುವುದನ್ನು ಕೇಳಿ ಸ್ಥಳೀಯ ನಿವಾಸಿಗಳು ಎಚ್ಚೆತ್ತುಕೊಂಡು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ಬೆಳಗ್ಗೆ ಸ್ಥಳೀಯ ನಿವಾಸಿಗಳಿಗೆ ಮಗು ಅಳುತ್ತಿರುವುದು ಕೇಳಿಸಿದೆ. ಕೂಡಲೇ ಅವರು ರಮಾದೇವಿ ಮನೆಗೆ ದೌಡಾಯಿಸಿದ್ದಾರೆ. ಈ ವೇಳೆ ಅಮ್ಮ- ಮಗಳು ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಘಟನೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ರಮಾದೇವಿ ಲಿವ್-ಇನ್ ಪಾರ್ಟ್ನರ್ ಮಲೇ ಕುಮಾರ್ ಪರಿದಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಕೊಲೆಗಡುಕನಾದ ಪ್ರಿಯತಮ..!
ಮೂಲತಃ ಒಡಿಶಾದವನಾದ ಪರಿದಿ, 2018ರಲ್ಲಿ ಬೆಂಗಳೂರಿಗೆ ಬಂದಿದ್ದಾನೆ. ಈತ ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿ ಕೊಳಾಯಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಇತ್ತ ರಮಾದೇವಿ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವಳಾಗಿದ್ದು, ಅಪಾರ್ಟ್ ಮೆಂಟ್ ಉದ್ಯೋಗಿಗಳ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಅಂತೆಯೇ ಇಬ್ಬರೂ ಲಿವ್-ಇನ್-ಟುಗೇದರ್ ಆಗಿ ಜೀವನ ನಡೆಸಲು ಆರಂಭಿಸಿದರು. ಹೀಗೆ ಜೀವಿಸುತ್ತಿದ್ದ ಇವರಿಗೆ 4 ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು.
ಕ್ರಮೇಣ ರಮಾದೇವಿ ಪೋಷಕರು ಹಾಗೂ ಸಹೋದರರು ಈ ದಂಪತಿ ಜೊತೆ ಇರಲು ಆರಂಭಿಸಿದರು. ಇದೇ ವೇಳೆ ತಮ್ಮ ಮಗಳನ್ನು ಮದುವೆ ಮಾಡಿಕೊಳ್ಳುವಂತೆ ಪರಿದಿಗೆ ರಮಾದೇವಿ ತಾಯಿ ಒತ್ತಡ ಹೇರಲು ಆರಂಭಿಸಿದರು. ಆದರೆ ಈ ಪ್ರಸ್ತಾಪವನ್ನು ಪರಿದಿ ವಿರೋಧಿಸಿದನು. ಇದೇ ಕಾರಣಕ್ಕೆ ಇಬ್ಬರನ್ನು ಕೊಲೆ ಮಾಡಲು ಆತ ನಿರ್ಧರಿಸಿದ್ದಾನೆ.
ಶನಿವಾರ ರಮಾದೇವಿಯ ತಂದೆ ಹಾಗೂ ಸಹೋದರರು ಕೆಲಸಕ್ಕಾಗಿ ಹೊರಗಡೆ ಹೋಗಿದ್ದರು. ಇಬ್ಬರು ಮಹಿಳೆಯರು, ಮಗು ಹಾಗೂ ಪರಿದಿ ಮಾತ್ರ ಮನೆಯಲ್ಲಿ ಇದ್ದರು. ಇದೇ ಸಮಯವನ್ನು ಉಪಯೋಗಿಸಿಕೊಂಡ ಪರಿದಿ, ಮೊದಲು ಲಕ್ಷ್ಮಿ ದೇವಿಯ ಹತ್ತು ಹಿಸುಕಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ.