ಉಡುಪಿ: ಕಡಲತೀರದ ಅಪಾಯಕಾರಿಗಳ ಬಗ್ಗೆ ಹೆಚ್ಚು ನಿಗಾ ವಹಿಸುತ್ತೇವೆ. ಮೀನುಗಾರಿಕೆಗೆ ಸಂಬಂಧಿಸದ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಕೋಸ್ಟ್ ಗಾರ್ಡ್ ಎಸ್ಪಿ ಕಚೇರಿಗೆ ಭೇಟಿ ನೀಡಿದ ಭಾಸ್ಕರ್ ರಾವ್, ಕೋಸ್ಟ್ ಗಾರ್ಡ್ ಪೊಲೀಸರು, ಸ್ಥಳೀಯ ಮೀನುಗಾರರ ಜೊತೆ ಸಭೆ ನಡೆಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಕರಾವಳಿಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ಮೀನುಗಾರರು ಕಾರ್ಮಿಕರಾಗಿದ್ದಾರೆ. ಬೋಟ್ ಮಾಲೀಕರ, ಕಾರ್ಮಿಕರ ಸಂಪೂರ್ಣ ವಿವರಗಳನ್ನು ಸಂಗ್ರಹ ಮಾಡುತ್ತೇವೆ. ದೇಶದ ಭದ್ರತೆಗೆ ಅಪಾಯ ತರುವವರು ಕುರಿತು ತಪಾಸಣೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಅರಬ್ಬಿ ಸಮುದ್ರದ ದಡ ತುಂಬಾ ಸೂಕ್ಷ್ಮ ಪ್ರದೇಶ. ಭದ್ರತೆಗೆ ಹೆಚ್ಚಿನ ಶಸ್ತ್ರಾಸ್ತ್ರ, ಸಿಬ್ಬಂದಿ ಅವಶ್ಯಕತೆ ಇದೆ. ಕೋಸ್ಟ್ ಗಾರ್ಡ್ ಭದ್ರತೆಗೆ 3 ಜೆಟ್ ಸ್ಕೀ ಬೋಟ್ ಗಳನ್ನು ಖರೀದಿ ಮಾಡಲಿದ್ದೇವೆ. ಕೋಸ್ಟ್ ಗಾರ್ಡ್ ನಲ್ಲಿ ಇನ್ನಷ್ಟು ಆವಿಷ್ಕಾರ, ತಂತ್ರಜ್ಞಾನಗಳನ್ನು ಅಳವಡಿಸುತ್ತೇವೆ. ಕರಾವಳಿ ಕರ್ನಾಟಕದ 43 ಬೀಚ್ ಗಳಿಗೆ ಹೆಚ್ಚಿನ ಭದ್ರತೆ ಕೊಡಲಿದ್ದೇವೆ. ಸಮುದ್ರಕ್ಕೆ ಹೋಗುವವರ, ಬರುವವರ ಕುರಿತು ಪಕ್ಕಾ ಲೆಕ್ಕ ಹಾಕುವ ವ್ಯವಸ್ಥೆ ಮಾಡುತ್ತೇವೆ ಎಂದರು. ಈ ವೇಲೆ ಕೋಸ್ಟ್ ಗಾರ್ಡ್ ಎಸ್ಪಿ ಚೇತನ್ ಜೊತೆಗಿದ್ದರು.