ತಂಗಿಯ ಮೇಲೆ ಕಣ್ಣು ಹಾಕಿದ ಯುವಕನನ್ನು ಕೊಲೆ ಮಾಡಿದ ಅಣ್ಣ

Public TV
1 Min Read
Chikkaballapur crime2

ಚಿಕ್ಕಬಳ್ಳಾಪುರ: ತಂಗಿಯ ಮೇಲೆ ಕಣ್ಣು ಹಾಕಿದ ಯುವಕನೊರ್ವನನ್ನು ಆಕೆಯ ಅಣ್ಣ ಮತ್ತು ಆತನ ಸ್ನೇಹಿತರು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Chikkaballapur crime medium

ಪಶ್ಚಿಮ ಬಂಗಾಳ ಮೂಲದ ಅಭೀದ್ ಆಲಿ (19) ಮೃತನಾಗಿದ್ದಾನೆ. ಮನು(23), ನವೀನ್(24), ಶ್ರೀಕಾಂತ್ (24), ಸುನೀಲ್(24) ಹಲ್ಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಶೀಗಮಾಕಲಹಳ್ಳಿ ಗ್ರಾಮದ ಬಳಿ, ರಾಷ್ಟ್ರೀಯ ಹೆದ್ದಾರಿ 44ರ ಕಾಮಗಾರಿ ಕೆಲಸಕ್ಕೆ ಬಂದ ಅಭೀದ್ ಆಲಿ ರಸ್ತೆ ಕಾಮಗಾರಿಯ ತಾತ್ಕಾಲಿಕ ಶೆಡ್ ನಲ್ಲಿ ವಾಸವಾಗಿದ್ದನು. ಈತ ಯುವತಿಯನ್ನು ರೇಗಿಸಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಇದನ್ನೂ ಓದಿ:  ಶಾಲೆ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ಕೊಟ್ಟ ನಟ ಅಕ್ಷಯ್ ಕುಮಾರ್

ಅಭೀದ್ ಆಲಿ ಜೂನ್ 7 ರಂದು ಮಟ ಮಟ ಮಧ್ಯಾಹ್ನ ಶೆಡ್ ನಿಂದ ಆಚೆ ಬಂದು, ಪಕ್ಕದ ಜಮೀನಿನಲ್ಲೆ ಹಸುಗಳನ್ನು ಮೇಯಿಸುತ್ತಿದ್ದ 21 ವರ್ಷದ ಯುವತಿಯನ್ನು ನೋಡಿದ್ದಾನೆ. ಯುವತಿಯನ್ನು ನೋಡಿ ಸುಮ್ಮನಿರದೆ ಆಕೆಯನ್ನು ರೇಗಿಸಿದ್ದಾನೆ. ಗಾಬರಿಗೊಂಡ ಯುವತಿ, ತಕ್ಷಣ ತನ್ನ ಅಣ್ಣ ಮನು ಎನ್ನುವವನಿಗೆ ಫೋನ್ ಮಾಡಿ ಘಟನೆಯನ್ನು ವಿವರಿಸಿದ್ದಾಳೆ.

Police Jeep

ಅಲ್ಲಿಗೆ ಬಂದ ಮನು ಹಾಗೂ ಆತನ ಮೂವರು ಸ್ನೇಹಿತರು ಅಬೀದ್ ಆಲಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ರಸ್ತೆ ಕಾಮಗಾರಿಯ ಗುತ್ತಿಗೆದಾರ ಲೋಕೇಶ ಎನ್ನುವ ವ್ಯಕ್ತಿ, ಗಾಯಾಳು ಅಲಿಯನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಬೀದ್ ಅಲಿ ಮೃತಪಟ್ಟಿದ್ದಾನೆ. ಅಲಿ ಜೊತೆಗಾರ ಕಾರ್ಮಿಕ ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೊಲೆ, ಪ್ರಾಣಬೆದರಿಕೆ ಆರೋಪಗಳಡಿ ಕಲಂ. 302, 201, 506, 34 ಐ.ಪಿ.ಸಿ ಪ್ರಕರಣ ದಾಖಲು ಮಾಡಿದ್ದಾರೆ.

police web

ಕೊಲೆ ಆರೋಪಿಗಳಾದ ಯುವತಿಯ ಅಣ್ಣ ಮನು, ಸುನೀಲ್, ನವೀನ್, ಶ್ರೀಕಾಂತ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹೊಟ್ಟೆ ಪಾಡಿಗೆ ಎಲ್ಲಿಂದಲೋ ರಾಜ್ಯಕ್ಕೆ ಬಂದ ಯುವಕನೊರ್ವ ಯುವತಿಯನ್ನು ರೇಗಿಸಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಪೊಲೀಸರ ತನಿಖೆಯಿಂದಲೇ ನಿಜವಾದ ಕಾರಣ ತಿಳಿಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *