ಚಿಕ್ಕಮಗಳೂರು: ಡ್ರಗ್ ಮಾಫಿಯಾದಲ್ಲಿ ಇಲ್ಲಿಯವರೆಗೆ ಸಹ ಕಲಾವಿದರು ಸಿಗುತ್ತಿದ್ದರು. ಈಗ ಮೇನ್ ಆ್ಯಕ್ಟರ್ ಗಳು ಸಿಗತ್ತಾರಾ ನೋಡಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನ ನಗರಸಭೆಯಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ಎಂಬುವುದು ವ್ಯವಸ್ಥಿತವಾದ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಜಾಲ. ಡ್ರಗ್ಸ್ ಪ್ರಕರಣದ ತನಿಖೆಯನ್ನ ಗಂಭೀರವಾಗಿ ನಡೆಸಲಾಗುತ್ತಿದೆ. ಈ ಡ್ರಗ್ಸ್ ರಾಕೆಟ್ನಲ್ಲಿ ಯಾರಿದ್ದಾರೆ? ವ್ಯಾಪಾರ ಯಾರದ್ದು? ಎಂಬುದು ತನಿಖೆಯ ಬಳಿಕ ತಿಳಿಯಲಿದೆ ಎಂದರು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಡ್ರಗ್ ಮಾಫಿಯಾ ಬಗ್ಗೆ ತಮಗೆ ಗೊತ್ತಿರುವ ಮಾಹಿತಿ ನೀಡಲಿ. ಅವರಿಗೆ ರಕ್ಷಣೆ ಇದ್ದೆ ಇದೆ. ಅವರಿಗೆ ರಕ್ಷಣೆಯನ್ನ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡ್ತಾರೆ ಎಂದಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ ಸಹಕಾರ ನಮಗೆ ಅಗತ್ಯವಿದೆ. ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಅವರಿಗೆ ಪೊಲೀಸ್ ಇಲಾಖೆ ರಕ್ಷಣೆಯ ವ್ಯವಸ್ಥೆ ಮಾಡುತ್ತದೆ. ಹೀಗಾಗಿ ಅವರು ತನಿಖೆಗೆ ಸಹಕರಿಸಬೇಕು. ಈ ಜಾಲವನ್ನ ಬಗ್ಗು ಬಡಿಯಲು, ಮತ್ತಷ್ಟು ಜನ ಬಲಿಯಾಗದಿರಲು ಇಂದ್ರಜಿತ್ ಲಂಕೇಶ್ ಅವರ ಸಹಕಾರ ಬೇಕು ಎಂದು ತಿಳಿಸಿದರು.