ಉಡುಪಿ: ಜಿಲ್ಲೆಯಾದ್ಯಂತ ಕೊರೊನಾ ಹಾವಳಿ ಜೋರಾಗಿದೆ. ರಾಜ್ಯಕ್ಕೆ ನಾಲ್ಕನೇ ಸ್ಥಾನದಲ್ಲಿರುವ ಉಡುಪಿಯಲ್ಲಿ 1,390 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ನಡುವೆ ಡೆಂಗ್ಯೂ ಮಹಾಮಾರಿ ಯುವತಿಯನ್ನು ಬಲಿ ಪಡೆದಿದೆ.
ಬೆಳ್ಮಣ್ ನಿವಾಸಿ ದಿವ್ಯಾ (23) ಮೃತ ನರ್ಸ್. ದಿವ್ಯಾ ಉಡುಪಿ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಖಾಸಗಿ ಆಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 15 ದಿನದಿಂದ ಜ್ವರದಿಂದ ಬಳಲುತ್ತಿದ್ದರು. ನಂತರ ತಾನೇ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿವ್ಯಾ ಸಾವನ್ನಪ್ಪಿದ್ದಾರೆ.
ಸೋಮವಾರ ಜ್ವರವು ಉಬ್ಬಣಗೊಂಡ ಪರಿಣಾಮ ದಿವ್ಯಾರನ್ನು ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ದಾಖಲಿಸಿದ ಒಂದು ಗಂಟೆಯಲ್ಲಿ ದಿವ್ಯಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಾನ್ಸೂನ್ ಅಬ್ಬರ ಜೋರಾಗಿದ್ದು, ಇದರಿಂದ ಸೊಳ್ಳೆ ಕಾಟ ಜಾಸ್ತಿಯಾಗಿದೆ. ಹಗಲು ಹೊತ್ತಿನ ಸೊಳ್ಳೆ ಕಡಿತ ಡೆಂಗ್ಯೂ ತರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.