-ರಾಜಕೀಯ ಗುರುವಿನ ಕುಟುಂಬದ ಜೊತೆ ಸಂಬಂಧ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಗುರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುಟುಂಬದ ಜೊತೆಯೇ ಸಂಬಂಧ ಬೆಳಸಲಿದ್ದಾರೆ. ಎಸ್.ಎಂ.ಕೃಷ್ಣ ಅವರ ಮೊಮ್ಮಗ, ಉದ್ಯಮಿ ದಿವಂಗತ ಸಿದ್ದಾರ್ಥ್ ಹಿರಿಯ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ಜೊತೆಗೆ ಡಿ.ಕೆ.ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯ ಮದುವೆ ಮಾತುಕತೆ ನಡೆದಿದೆ. ಕಳೆದ ಮೂರು ತಿಂಗಳಿನಿಂದ ಈ ಸಂಬಂಧ ಮಾತುಕತೆ ಹಂತ ಹಂತವಾಗಿ ನಡೆದಿತ್ತು. ಈಗ ಅಂತಿಮ ಮಾತುಕತೆ ನಡೆದಿದ್ದು ವಧು ವರರ ಮನೆಯವರು ಪರಸ್ಪರರ ಮನೆಗೆ ಹೋಗಿ ಬರುವ ಶಾಸ್ತ್ರವನ್ನ ಮುಗಿಸಿದ್ದಾರೆ.
ಬಹುತೇಕ ಮಾತುಕತೆ ಮುಗಿದಿದ್ದು ಮುಂದಿನ ವರ್ಷ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿಯೇ ನಿಶ್ಚಿತಾರ್ಥ ಸಹ ನಡೆಯಲಿದೆ ಎಂದು ಹೇಳಲಾಗಿದೆ. ಸಿದ್ಧಾರ್ಥ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ದಿನಾಂಕ ಹಾಗೂ ಮದುವೆ ದಿನಾಂಕವಷ್ಟೆ ಅಧಿಕೃತವಾಗಬೇಕಿದೆ.
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಎಲ್ಲ ದೇವರ ಇಚ್ಛೆ. ಸಿದ್ಧಾರ್ಥ್ ಅವರು ಸಾವನ್ನಪ್ಪಿ ಇನ್ನು ಒಂದು ವರ್ಷ ಕಳೆದಿಲ್ಲ. ಸಿದ್ಧಾಥ್ ಅವರ ಒಂದು ವರ್ಷದ ಕಾರ್ಯಗಳು ನಡೆಯಬೇಕಿದೆ. ಎಲ್ಲ ಕಾರ್ಯಕ್ರಮಗಳು ಮುಗಿದ ಬಳಿಕ ಮದುವೆಯ ಕೆಲಸಗಳು ನಡೆಯಲಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.